ಬೆಳಗಾವಿ ಪ್ಯಾಂಥರ್ಸ್ಗೆ ಜಯ
ನಾಯಕ ಪಾಂಡೆ ಅರ್ಧಶತಕ
ಕೆಪಿಎಲ್ ಟ್ವೆಂಟಿ-20 14ನೇ ಪಂದ್ಯ
ಬೆಂಗಳೂರು, ಆ.23: ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 14ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ನಾಯಕ ಮನೀಷ್ ಪಾಂಡೆ 58 ರನ್(30ಎ, 4 ಬೌ, 4ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 111 ರನ್ ಗಳಿಸಬೇಕಿದ್ದ ಪ್ಯಾಂಥರ್ಸ್ ತಂಡ ಇನ್ನೂ 49 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 115 ರನ್ ಗಳಿಸಿತು.
12ನೇ ಓವರ್ನ 5 ಎಸೆತದಲ್ಲಿ ಮನೀಷ್ ಪಾಂಡೆ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ರವಿಕುಮಾರ್ ಸಮರ್ಥ್ 5ರನ್, ದೀಕ್ನಾಂಶು ನೇಗಿ 12 ರನ್ ಗಳಿಸಿ ಔಟಾದರು.
5.1 ಓವರ್ಗಳಲ್ಲಿ 39ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಬೆಳಗಾವಿ ತಂಡದ ಬ್ಯಾಟಿಂಗ್ನ್ನು ಮುಂದುವರಿಸಿದ ನಾಯಕ ಮನೀಷ್ ಪಾಂಡೆ ಮತ್ತು ಅಭಿನವ್ ಮನೋಹರ್ ಮುರಿಯದ ಜೊತೆಯಾಟದಲ್ಲಿ 76 ರನ್ ಸೇರಿಸಿದರು. ಮನೋಹರ್ 22 ರನ್(17ಎ, 2ಸಿ) ಗಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 110 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಶರತ್ (32), ನಾಯಕ ರಾಂಗ್ಸೆನ್ ಜೋನಾಥನ್ (29), ನಿಕಿನ್ ಜೋಶ್(21) ಎರಡಂಕೆಯ ಸ್ಕೋರ್ ದಾಖಲಿಸಿದರು. ಬೆಳಗಾವಿ ತಂಡದ ದರ್ಶನ್ ಎಂ.ಬಿ 27ಕ್ಕೆ 3 ವಿಕೆಟ್ , ರೆರ್ ಫಾರೂಕಿ ಮತ್ತು ರಿತೀಶ್ ಭಟ್ಕಳ್ ತಲಾ 2 ವಿಕೆಟ್ ಪಡೆದರು.