ಇಂದು ಭಾರತ-ದ. ಆಫ್ರಿಕಾ ಮೊದಲ ಟ್ವೆಂಟಿ-20
ಚುಟುಕು ಮಾದರಿಯ ಕ್ರಿಕೆಟ್ ವಿಶ್ವಕಪ್ಗೆ ಕೊಹ್ಲಿ ಪಡೆಯ ತಯಾರಿ ಶುರು
ಧರ್ಮಶಾಲಾ, ಸೆ.14: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ರವಿವಾರ ನಡೆಯಲಿದ್ದು, ಯುವ ಆಟಗಾರರನ್ನು ಒಳಗೊಂಡ ತಂಡ ವಿಶ್ವಕಪ್ಗೆ ತಯಾರಿ ಆರಂಭಿಸಲಿದೆ.
ವೆಸ್ಟ್ಇಂಡೀಸ್ ವಿರುದ್ಧ ಟಿ-20 ಸರಣಿಯನ್ನು 3-0 ಅಂತರದಲ್ಲಿ ಜಯ ಸಾಧಿಸಿದ್ದ ಟೀಮ್ ಇಂಡಿಯಾಕ್ಕೆ ಆಫ್ರಿಕಾ ವಿರುದ್ಧ ನೈಜ ಪರೀಕ್ಷೆ ಎದುರಾಗಲಿದೆ. ಕ್ವಿಂಟನ್ ಡಿ ಕಾಕ್ , ಕಾಗಿಸೊ ರಬಾಡ , ಡೇವಿಡ್ ಮಿಲ್ಲರ್ ಅವರು ಕೊಹ್ಲಿ ಪಡೆಗೆ ಸವಾಲೊಡ್ಡಲಿದ್ದಾರೆ. ಆಸ್ಟ್ರೇಲಿಯದಲ್ಲಿ 2020ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನ ತಯಾರಿಗೆ ಭಾರತಕ್ಕೆ ಇನ್ನು 20 ಪಂದ್ಯಗಳು ಬಾಕಿ ಇವೆ. 13 ತಿಂಗಳುಗಳಲ್ಲಿ ಭಾರತ ವಿಶ್ವಕಪ್ಗಾಗಿ ಬಲಿಷ್ಠ ತಂಡ ರೂಪಿಸಬೇಕಾಗಿದೆ. ಇದರ ನಡುವೆ ಐಪಿಎಲ್ ಟ್ವೆಂಟಿ-20 ಟೂರ್ನಿ ನಡೆಯಲಿದೆ. ಇದು ಭಾರತದ ಆಟಗಾರರ ತಯಾರಿಗೆ ಉತ್ತಮ ಅವಕಾಶ ಒದಗಿಸಲಿದೆ.
ಮಹೇಂದ್ರ ಸಿಂಗ್ ಧೋನಿ ಸೀಮಿತ ಓವರ್ಗಳ ಕ್ರಿಕೆಟ್ನಿಂದ ನಿವೃತ್ತಿಯಾಗುವ ವಿಚಾರದಲ್ಲಿ ಏನ್ನೂ ಹೇಳಿಲ್ಲ. ಮುಂಬರುವ ಟ್ವೆಂಟಿ-20 ವಿಶ್ವಕಪ್ ತನಕ ತಂಡದಲ್ಲಿ ಧೋನಿ ಇರುತ್ತಾರೆ. ಅಷ್ಟರ ತನಕ ಅವರು ಸೀಮಿತ ಓವರ್ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ. ಆಯ್ಕೆ ಸಮಿತಿಯು ಅವರ ನಿವೃತ್ತಿಯ ವಿಚಾರದಲ್ಲಿ ವೌನವಾಗಿದೆ. ಧೋನಿ ಉತ್ತರಾಧಿಕಾರಿಯ ಶೋಧ ನಡೆಯುತ್ತಿದೆ. ರಿಷಭ್ ಪಂತ್ ಸ್ಥಾನ ದೃಢಪಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಯಜುವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ತಂಡದ ಭವಿಷ್ಯದ ಅವಳಿ ಸ್ಪಿನ್ನರ್ಗಳಾಗಿ ರೂಪುಗೊಳ್ಳುತ್ತಿದ್ದಾರೆ.
ರಾಜಸ್ತಾನದ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಉತ್ತಮ ಸ್ಪಿನ್ನರ್ ಆಗಿ ರೂಪುಗೊಳ್ಳುತ್ತಿದ್ದಾರೆ. ನವ್ದೀಪ್ ಸೈನಿ, ಖಲೀಲ್ ಅಹ್ಮದ್ ತಂಡದಲ್ಲಿದ್ದಾರೆ.
ಭಾರತ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೃನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವ್ದೀಪ್ ಸೈನಿ.
► ದಕ್ಷಿಣ ಆಫ್ರಿಕ:
ಕ್ವಿಂಟನ್ ಡಿ ಕಾಕ್(ನಾಯಕ), ರಾಸೈ ವ್ಯಾನ್ ಡೆರ ಡುಸೆನ್(ವಿಕೆಟ್ ಕೀಪರ್), ತೆಂಬ ಬವುಮಾ, ಜೂನಿಯರ್ ಡಾಲಾ, ಬಿಜೊರ್ನ್ ಫಾರ್ಟುನ್, ಬೆಯುರೆನ್ ಹೆನ್ರಿಕ್ಸ್, ರೀಝಾ ಹೆನ್ರಿಕ್ಸ್, ಡೇವಿಡ್ ಮಿಲ್ಲರ್, ಆ್ಯನ್ರಿಚ್ ನೊರ್ಟ್ಜೆ, ಆ್ಯಂಡ್ಲೆ ಫೆಹ್ಲುಕ್ವಾಯೊ, ಡ್ವಾಯ್ನೆ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೀಝ್ ಶಂಶಿ, ಜಾರ್ಜ್ ಲೆಂಡೆ.