ಆಟಗಾರರು-ಬುಕ್ಕಿಗಳ ಸಂಪರ್ಕ ಕುರಿತು ಬಿಸಿಸಿಐ ತನಿಖೆ
ತಮಿಳನಾಡು ಪ್ರೀಮಿಯರ್ ಲೀಗ್
ಹೊಸದಿಲ್ಲಿ, ಸೆ.19: ತಮಿಳನಾಡು ಪ್ರೀಮಿಯರ್ ಲೀಗ್(ಟಿಪಿಎಲ್)ನಲ್ಲಿ ವ್ಯಾಪಕ ಭ್ರಷ್ಟಾಚಾರವನ್ನು ಪತ್ತೆ ಹಚ್ಚಿರುವ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು) ಆಂತರಿಕ ತನಿಖೆಯಲ್ಲಿ ಭಾರತದ ಆಟಗಾರ, ಐಪಿಎಲ್ ಹಾಗೂ ರಣಜಿ ಟ್ರೋಫಿ ಕೋಚ್ ಸಹಿತ ಹಲವರನ್ನು ಪಟ್ಟಿ ಮಾಡಿದೆ.
ಬುಕ್ಕಿಗಳು ಹಾಗೂ ಮ್ಯಾಚ್-ಫಿಕ್ಸರ್ಗಳು ಟೀಮ್ ಮಾಲಕರೊಂದಿಗೆ ಅಕ್ರಮ ಒಪ್ಪಂದದ ಬಳಿಕ ಫ್ರಾಂಚೈಸಿಗಳ ಮೇಲೆ ಹಿಡಿತ ಸಾಧಿಸಿದ್ದರು. ಬೆಟ್ಟಿಂಗ್ನ ಮೂಲಕ ಭಾರೀ ಹಣ ಗಳಿಸುತ್ತಿದ್ದರು ಎಂದು ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಬುಕ್ಕಿಗಳೊಂದಿಗೆ ಸಂಪರ್ಕದಲ್ಲಿರುವ ಪ್ರಮುಖ ವ್ಯಕ್ತಿಗಳು ವಿವಿಧ ತಂಡಗಳಲ್ಲಿ ಚದುರಿಹೋದ ಬಳಿಕ ತಮಿಳುನಾಡಿನ ಇಡೀ ಟ್ವೆಂಟಿ-20 ಲೀಗ್ನಲ್ಲಿ ರಾಜಿ ಕಂಡುಬಂದಿರುವುದು ಗಂಭೀರ ಬೆಳವಣಿಗೆಯಾಗಿದೆ. ಬೆಟ್ಟಿಂಗ್ನಲ್ಲಿ ಭಾಗಿಯಾದವರ ಮಧ್ಯೆ ಹಣಕಾಸಿಗೆ ಸಂಬಂಧಿಸಿ ವಿವಾದ ಬೆಳಕಿಗೆ ಬಂದ ಬಳಿಕ ತನಿಖಾಧಿಕಾರಿಗಳು ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದರು. ಈ ವಿಚಾರದ ಬಗ್ಗೆ ಎಸಿಯು ಕಾನೂನು ಅಭಿಪ್ರಾಯ ಸಂಗ್ರಹಿಸಲಿದ್ದು, ಮುಂಬರುವ ದಿನಗಳಲ್ಲಿ ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ.