ಹೊರದಬ್ಬುವುದಕ್ಕೂ ಮೊದಲು ಧೋನಿ ನಿವೃತ್ತಿಯಾಗಬೇಕು
ಸುನಿಲ್ ಗವಾಸ್ಕರ್ ಸಲಹೆ
ಹೊಸದಿಲ್ಲಿ,ಸೆ.20: ಅತ್ಯಂತ ದೀರ್ಘಕಾಲ ಕ್ರಿಕೆಟ್ ಆಡಿದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿರ್ಗಮಿಸುವ ಸಮಯ ಬಂದಿದೆ ಮತ್ತು ಅವರನ್ನು ತಂಡದಿಂದ ಹೊರದಬ್ಬುವುದಕ್ಕೂ ಮೊದಲು ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಬೇಕು ಎಂದು ಭಾರತದ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಯಾವಾಗ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಾರೆ ಎನ್ನುವ ಕುರಿತು ಭಾರತ ವಿಶ್ವಕಪ್ನ ಸೆಮಿಫೈನಲ್ನಿಂದ ಹೊರಬಿದ್ದ ನಂತರ ಅಭಿಮಾನಿಗಳು, ಮಾಜಿ ಆಟಗಾರರು ಮತ್ತು ತಜ್ಞರು ಚರ್ಚೆ ನಡೆಸುತ್ತಲೇ ಇದ್ದಾರೆ.
2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ ಸದ್ಯ 350 ಏಕದಿನ ಪಂದ್ಯಗಳನ್ನಾಡಿದ್ದು ನಿವೃತ್ತಿಯ ಬಗ್ಗೆ ಇದುವರೆಗೆ ಯಾವ ಸೂಚನೆಯನ್ನೂ ನೀಡಿಲ್ಲ. ಆದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯಾವಳಿಯಿಂದ ಹೊರಗುಳಿದಿದ್ದ ಧೋನಿ ಹದಿನೈದು ದಿನಗಳ ಕಾಲ ಭಾರತೀಯ ಪ್ರಾದೇಶಿಕ ಸೇನೆಯ ಜೊತೆ ಸೇವೆ ಸಲ್ಲಿಸಲು ತೆರಳಿದ್ದರು. ಸದ್ಯ ದಕ್ಷಿಣ ಆಫ್ರಿಕ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿಯಿಂದಲೂ ಧೋನಿಯನ್ನು ಹೊರಗಿಡಲಾಗಿದೆ.