ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥೆಯಾಗಿ ಎನ್.ಶ್ರೀನಿವಾಸನ್ ಪುತ್ರಿ ?
ಚೆನ್ನೈ, ಸೆ.21: ಸುಪ್ರೀಂಕೋರ್ಟ್ ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್ಸಿಎ)ಯ ಚುನಾವಣೆಗೆ ಇರುವ ಅಡೆತಡೆಯನ್ನು ನಿವಾರಿಸಿದ ಹಿನ್ನೆಲೆಯಲ್ಲಿ ಎನ್.ಶ್ರೀನಿವಾಸನ್ ತನ್ನ ವಂಶಾಡಳಿತ ಮುಂದುವರಿಸಲು ಬಯಸಿದ್ದು, ತನ್ನ ಪುತ್ರಿಯನ್ನು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಲು ಸಿದ್ಧತೆ ನಡೆಸಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀವಾಸನ್ ಪುತ್ರಿ ರೂಪಾ ಗುರುನಾಥ್ ನೂತನ ಟಿಎನ್ಸಿಎ ಅಧ್ಯಕ್ಷೆಯಾಗಿ ನೇಮಿಸಬೇಕೆಂದು ಕ್ಲಬ್ನ ಪ್ರತಿನಿಧಿಗಳು ಬಯಸಿದ್ದಾರೆ. ಒಂದು ವೇಳೆ ರೂಪಾ ನೂತನ ಟಿಎನ್ಸಿಎ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಬಿಸಿಸಿಐನ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಇತರ ಬಣಗಳಲ್ಲಿ ಯಾವ ಹೆಸರೂ ಕೇಳಿಬರದ ಹಿನ್ನೆಲೆಯಲ್ಲಿ ರೂಪಾ ಹೆಚ್ಚಿನ ಸವಾಲು ಎದುರಿಸುವ ಸಾಧ್ಯತೆಯಿಲ್ಲ.
ಕೆಲವು ದಿನಗಳ ಹಿಂದೆ ಕ್ರಿಕೆಟ್ ಕ್ಲಬ್ನ ಪ್ರತಿನಿಧಿಗಳು ಹಾಗೂ ಟಿಎನ್ಸಿಎ ಉನ್ನತಾಧಿಕಾರಿಗಳು ಸಭೆ ನಡೆಸಿದ್ದು ಈ ವೇಳೆ ರೂಪಾ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ. ಕ್ರಿಕೆಟ್ ರಾಜಕೀಯಕ್ಕೆ ರೂಪಾ ಹೊಸಮುಖವಾಗಿದ್ದರೂ, ಸಿಮೆಂಟ್ ವ್ಯವಹಾರದಲ್ಲಿ ಎತ್ತಿದ ಕೈ ಆಗಿದ್ದರು. ಈಕೆ ಎಲ್ಲ ಸವಾಲನ್ನು ಎದುರಿಸುವ ವಿಶ್ವಾಸ ನಮಗಿದೆ ಎಂದು ಮೂಲಗಳು ತಿಳಿಸಿವೆ.