ಗೋವಾ ವಿರುದ್ಧ ಸುಲಭ ಜಯ ಸಾಧಿಸಿದ ಕರ್ನಾಟಕ
ವಿಜಯ ಹಝಾರೆ ಟ್ರೋಫಿ
ಆಲೂರು(ಕರ್ನಾಟಕ), ಅ.16: ಆರಂಭಿಕ ಬ್ಯಾಟ್ಸ್ಮನ್ ದೇವದತ್ತ ಪಡಿಕ್ಕಲ್(ಔಟಾಗದೆ 102, 116 ಎಸೆತ, 6 ಬೌಂಡರಿ, 5 ಸಿಕ್ಸರ್)ಶತಕದ ನೆರವಿನಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ವಿಜಯ ಹಝಾರೆ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ 8 ವಿಕೆಟ್ಗಳ ಸುಲಭ ಜಯ ಸಾಧಿಸಿದೆ.
ಬುಧವಾರ ನಡೆದ ಕನಿಷ್ಠ ಮೊತ್ತದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗೋವಾ ತಂಡ 47.5 ಓವರ್ಗಳಲ್ಲಿ 171 ರನ್ಗೆ ಗಂಟುಮೂಟೆ ಕಟ್ಟಿತು.ಗೋವಾದ ಪರ ಆರಂಭಿಕ ಬ್ಯಾಟ್ಸ್ ಮನ್ ಕೌಶಿಕ್(75)ಅರ್ಧಶತಕ ಗಳಿಸಿದರು. ಮಿಸಾಲ್ ಔಟಾಗದೆ 33 ರನ್ ಕಲೆ ಹಾಕಿದರು.
ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ(3-29), ಜೆ.ಸುಚಿತ್(2-28)ಹಾಗೂ ಮಿಥುನ್(2-26)ಏಳು ವಿಕೆಟ್ಗಳನ್ನು ಹಂಚಿಕೊಂಡರು.
ಗೆಲ್ಲಲು 172 ರನ್ ಗುರಿ ಪಡೆದ ಕರ್ನಾಟಕ 34.2 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿರುವ ದೇವದತ್ತ ಪಡಿಕ್ಕಲ್ ಶತಕ ಸಿಡಿಸಿ ತಂಡವನ್ನು ಆಧರಿಸಿದರು.
ಕೆಎಲ್ ರಾಹುಲ್(9) ತಂಡದ ಮೊತ್ತ 40 ರನ್ ತಲುಪುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಆಗ ಕರುಣ್ ನಾಯರ್(21) ಜೊತೆ ಕೈಜೋಡಿಸಿದ ದೇವದತ್ತ್ 2ನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು.
ನಾಯರ್, ಅಮಿತ್ ವರ್ಮಾಗೆ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಮನೀಷ್ ಪಾಂಡೆ(ಔಟಾಗದೆ 34, 34 ಎಸೆತ, 1 ಬೌಂಡರಿ, 3 ಸಿಕ್ಸರ್)ಎಸೆತಕ್ಕೊಂದು ರನ್ ಗಳಿಸಿದ್ದಲ್ಲದೆ ಶತಕವೀರ ದೇವದತ್ತ ಜೊತೆ 3ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 72 ರನ್ ಗಳಿಸಿದರು.