ದೀಪಕ್ ಭರ್ಜರಿ ಬೌಲಿಂಗ್: ಬಾಂಗ್ಲಾವನ್ನು ಮಣಿಸಿದ ಭಾರತಕ್ಕೆ ಟ್ವೆಂಟಿ-20 ಸರಣಿ
ನಾಗ್ಪುರ,ನ.10: ಮಧ್ಯಮ ವೇಗದ ಬೌಲರ್ ದೀಪಕ್ ಚಹಾರ್ ಅವರ ಅಮೋಘ ಬೌಲಿಂಗ್(7 ರನ್ಗೆ 6 ವಿಕೆಟ್)ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 3ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 30 ರನ್ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಆರಂಭಿಕ ಆಟಗಾರ ಮುಹಮ್ಮದ್ ನಯೀಮ್ ಬಿರುಸಿನ ಅರ್ಧಶತಕ ದಾಖಲಿಸಿ ಭಾರತಕ್ಕೆ ಭೀತಿ ಹುಟ್ಟಿಸಿದ್ದರು. ಆಗ ತಂಡದ ನೆರವಿಗೆ ಧಾವಿಸಿದ ಯುವ ಬೌಲರ್ಗಳಾದ ದೀಪಕ್ ಚಹಾರ್ ಹಾಗೂ ಶಿವಂ ದುಬೆ ಭರ್ಜರಿ ಗೆಲುವು ತಂದರು.
ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ 3ನೇ ಪಂದ್ಯ ಗೆಲ್ಲಲು 175 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ 19.2 ಓವರ್ಗಳಲ್ಲಿ 144 ರನ್ ಗಳಿಸಿ ಆಲೌಟಾಯಿತು. ದೀಪಕ್ ಚಹಾರ್ 3.2 ಓವರ್ಗಳಲ್ಲಿ ಕೇವಲ 7 ರನ್ ನೀಡಿ ಆರು ವಿಕೆಟ್ ಉರುಳಿಸಿದರು. ಶಿವಂ ದುಬೆ(3-30) ಮೂರು ವಿಕೆಟ್ ಪಡೆದರು.
ಬಾಂಗ್ಲಾದೇಶ 12 ರನ್ಗೆ ಆರಂಭಿಕ ಆಟಗಾರ ಲಿಟನ್ ದಾಸ್ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದ ನಯೀಮ್ ಹಾಗೂ ಮುಹಮ್ಮದ್ ಮಿಥುನ್ ಭಾರತಕ್ಕೆ ಸೋಲಿನ ಭೀತಿ ಹುಟ್ಟಿಸಿದರು. ಮಿಥುನ್(27) ವಿಕೆಟನ್ನು ಪಡೆದ ಚಹಾರ್ ಭಾರತಕ್ಕೆ ಮೇಲುಗೈ ಒದಗಿಸಿದರು. ಚಹಾರ್ಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಅಪಾಯಕಾರಿ ಆಟಗಾರ ಮುಶ್ಫಿಕುರ್ರಹೀಂ ಖಾತೆ ತೆರೆಯದಂತೆ ನೋಡಿಕೊಂಡರು.
48 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 81 ರನ್ ಗಳಿಸಿದ ನಯೀಮ್ ಬಾಂಗ್ಲಾದ ಪರ ಏಕಾಂಗಿ ಹೋರಾಟ ನೀಡಿದರು.