ಭಾರತ -ಪಾಕ್ ಕ್ರಿಕೆಟ್ ಸರಣಿಯಿಂದ ದ್ವಿಪಕ್ಷೀಯ ಸಂಬಂಧ ಸುಧಾರಣೆ: ಮುಷ್ತಾಕ್ ಅಹ್ಮದ್
ಅಬುಧಾಬಿ, ನ.17: ಭಾರತ-ಪಾಕ್ ಮಧ್ಯೆ ಕ್ರಿಕೆಟ್ ಸಂಬಂಧ ಪುನರಾರಂಭವಾದರೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುತ್ತದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ಲೆಗ್ಸ್ಪಿನ್ನರ್ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
2012-13ರಲ್ಲಿ ಭಾರತದಲ್ಲಿ ನಡೆದ ಭಾರತ-ಪಾಕ್ ಕ್ರಿಕೆಟ್ ಸರಣಿಯ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರ ಈ ಎರಡು ದೇಶಗಳ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತ ಮತ್ತು ಪಾಕ್ ತಂಡಗಳ ಮಧ್ಯೆ ನಡೆಯುವ ಕ್ರಿಕೆಟ್ ಪಂದ್ಯ ಯಾವಾಗಲೂ ತುರುಸಿನ ಸ್ಪರ್ಧೆಯಿಂದ ರೋಮಾಂಚಕವಾಗಿರುತ್ತದೆ. ವಾಸ್ತವವಾಗಿ ಈ ಎರಡು ತಂಡಗಳ ನಡುವಿನ ಸರಣಿ ಆ್ಯಶಸ್ ಸರಣಿಗಿಂತ ಮಿಗಿಲಾದುದು. ಎರಡೂ ತಂಡಗಳ ನಡುವೆ ಸರಣಿ ನಡೆಯಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ ಎಂದವರು ಹೇಳಿದ್ದಾರೆ. ಅಬುಧಾಬಿ ಟಿ-10 ಲೀಗ್ ಕ್ರಿಕೆಟ್ನಲ್ಲಿ 49 ವರ್ಷದ ಮುಷ್ತಾಕ್ ಅಹ್ಮದ್ ಡೆಕ್ಕಾನ್ ಗ್ಲಾಡಿಯೇಟರ್ಸ್ನ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಸರಣಿ ಆರಂಭವಾದರೆ ಆಗ ಪರಿಸ್ಥಿತಿ ಸುಗಮವಾಗುತ್ತದೆ. ಆಗ ರಾಜಕಾರಣಿಗಳಿಗೆ ಸಂವಹನಕ್ಕೆ ಅತ್ಯುತ್ತಮ ಅವಕಾಶ ದೊರಕಿ ಎರಡೂ ದೇಶಗಳ ಸರಕಾರದ ಮಧ್ಯೆ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅಹ್ಮದ್ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ಸಭೆ ಸೇರಿ ಪರಿಸ್ಥಿತಿಯ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಇತ್ತೀಚೆಗೆ ಆರಂಭವಾದ ಕರ್ತಾರ್ಪುರ ಕಾರಿಡಾರ್ ಎರಡೂ ರಾಷ್ಟ್ರಗಳ ಪಾಲಿಗೆ ಒದಗಿರುವ ಉತ್ತಮ ಆರಂಭವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು. ಪಾಕಿಸ್ತಾನ ತಂಡದ ಈಗಿನ ನಿರಾಶಾಜನಕ ಪ್ರದರ್ಶನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕ್ ತಂಡ ಈಗ ಬದಲಾವಣೆಯ ಹೊಸ್ತಿಲಲ್ಲಿದೆ. ಈ ಹಂತದಲ್ಲಿ ಎಲ್ಲಾ ತಂಡಗಳಿಗೂ ಸ್ವಲ್ಪ ಹಿನ್ನಡೆಯಾಗುತ್ತದೆ. ಆದರೆ ಇದೀಗ ಮಿಸ್ಬಾ ಉಲ್ ಹಕ್ ಮುಖ್ಯ ಕೋಚ್ ಆಗಿ ನೇಮಕವಾಗಿದ್ದು ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಿಗೆ ಪ್ರತ್ಯೇಕ ನಾಯಕನನ್ನು ನೇಮಿಸಲಾಗಿದೆ. ಮುಂಬರುವ ದಿನಗಳಲ್ಲಿ ತಂಡದ ಪ್ರದರ್ಶನ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಟಗಾರರಿಗೆ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನಿಶ್ಚಿತತೆಯಿದೆ. ಇದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ. ಭಾರತದ ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್ ತಮ್ಮ ಬೌಲಿಂಗ್ಗೆ ಇನ್ನಷ್ಟು ವೈವಿಧ್ಯತೆ ಸೇರಿಸಿದರೆ ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.