ಎಲ್ಲರ ಹೃದಯ ಗೆದ್ದ ವೆಸ್ಟ್ಇಂಡೀಸ್ ವಿಕೆಟ್ಕೀಪರ್ ದಿನೇಶ್ ರಾಮದಿನ್
ತಿರುವನಂತಪುರ, ಡಿ.8: ತಾನೊಬ್ಬ ಕ್ರಿಕೆಟಿಗನೆಂಬ ಅಹಂ ಭಾವನೆ ಇಲ್ಲದೆ ಪುಟಾಣಿ ಕ್ರಿಕೆಟ್ ಅಭಿಮಾನಿಯತ್ತ ತೆರಳಿ ಗಿಫ್ಟ್ವೊಂದನ್ನು ನೀಡಿದ ವೆಸ್ಟ್ಇಂಡೀಸ್ ಕ್ರಿಕೆಟಿಗ ದಿನೇಶ್ ರಾಮದಿನ್ ಎಲ್ಲರ ಹೃದಯ ಗೆದ್ದಿದ್ದಾರೆ. ಇಲ್ಲಿ ರವಿವಾರ ನಡೆದ ಭಾರತ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯಕ್ಕಿಂತ ಮೊದಲು ರಾಮದಿನ್ ಟೀಮ್ ಬಸ್ನಿಂದ ಕೆಳಗಿಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ಕರ ಬಾಲಕಿ ತನ್ನತ್ತ ಕೈಬೀಸುತ್ತಿರುವುದನ್ನು ನೋಡಿದರು. ತಕ್ಷಣವೇ ಆ ಬಾಲಕಿಯತ್ತ ತೆರಳಿದ ರಾಮದಿನ್ ತನ್ನಲ್ಲಿದ್ದ ಎರಡು ಟಿಕೆಟ್ಗಳನ್ನು ಗಿಫ್ಟ್ ನೀಡಿದರು. ರಾಮದಿನ್ ಅವರು ಬಾಲಕಿಗೆ ಕ್ರಿಕೆಟ್ ಪಂದ್ಯದ ಟಿಕೆಟ್ ನೀಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಾಮದಿನ್ ರವಿವಾರ ನಡೆದ ಭಾರತ ವಿರುದ್ಧದ 2ನೇ ಪಂದ್ಯದಲ್ಲಿ ಆಡುತ್ತಿಲ್ಲ. ಆಡುವ 11ರ ಬಳಗದಲ್ಲಿ ರಾಮದಿನ್ ಬದಲಿಗೆ ನಿಕೊಲಸ್ ಪೂರನ್ರನ್ನು ಆಯ್ಕೆ ಮಾಡಲಾಗಿದೆ. ಉಭಯ ತಂಡಗಳು ಸಂಜೆ 7ರಿಂದ ಆರಂಭವಾದ ಪಂದ್ಯದಲ್ಲಿ ಭಾಗವಹಿಸಲು ಸಂಜೆ ವೇಳೆಗೆ ಸ್ಟೇಡಿಯಂಗೆ ತಲುಪಿದವು. ಭಾರತೀಯ ಆಟಗಾರರು ಅಭ್ಯಾಸಕ್ಕಾಗಿ ಸ್ಟೇಡಿಯಂಗೆ ಇಳಿದಾಗ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ಥಳೀಯ ಆಟಗಾರ ಸಂಜು ಸ್ಯಾಮ್ಸನ್ ಎಲ್ಲರ ಗಮನಸೆಳೆದರು.