ರಾಹುಲ್ ಸೇರ್ಪಡೆಯಿಂದ ಕರ್ನಾಟಕಕ್ಕೆ ಆನೆಬಲ: ಗೌತಮ್
ಬೆಂಗಳೂರು, ಫೆ.27: ಬಂಗಾಳ ವಿರುದ್ಧ ಶನಿವಾರದಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿ ಫೈನಲ್ನಲ್ಲಿ ವಿಶ್ವ ದರ್ಜೆಯ ಆಟಗಾರ ಕೆ.ಎಲ್.ರಾಹುಲ್ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ತಂಡಕ್ಕೆ ಆನೆ ಬಲ ಬಂದಿದೆ ಎಂದು ಆಲ್ರೌಂಡರ್ ಕೆ.ಗೌತಮ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಅವರು ಮನೀಷ್ ಪಾಂಡೆ, ಕರುಣ್ ನಾಯರ್ ಹಾಗೂ ದೇವದತ್ತ ಪಡಿಕ್ಕಲ್ ಅವರನ್ನೊಳಗೊಂಡ ಕರ್ನಾಟಕದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕಕ್ಕೆ ಸೇರ್ಪಡೆಯಾಗಿದ್ದಾರೆ. ನ್ಯೂಝಿಲ್ಯಾಂಡ್ ಪ್ರವಾಸದಲ್ಲಿರುವ ಭಾರತೀಯ ಟೆಸ್ಟ್ ತಂಡದ ಭಾಗವಾಗಿರುವ ಮಾಯಾಂಕ್ ಅಗರ್ವಾಲ್ ಕರ್ನಾಟಕ ತಂಡದಲ್ಲಿ ಗೈರಾಗಿರುವ ಏಕೈಕ ಪ್ರಮುಖ ಆಟಗಾರನಾಗಿದ್ದಾರೆ.
‘‘ರಾಹುಲ್ ವಾಪಸಾತಿಯಿಂದ ನಮ್ಮ ತಂಡಕ್ಕೆ ಆನೆ ಬಲ ಬಂದಿದೆ. ನಾವು ಖಂಡಿತವಾಗಿಯೂ ರಾಹುಲ್ ಪುನರಾಗಮನದ ಲಾಭ ಪಡೆಯಲು ಎದುರು ನೋಡುತ್ತಿದ್ದೇವೆ. ಬಂಗಾಳ ತಂಡ ನಮ್ಮ ತಂಡದ ಪ್ರಮುಖ ಆಟಗಾರರ ಬಗ್ಗೆ ಚಿಂತಿಸಲು ಆರಂಭಿಸಿದರೆ ಆ ತಂಡ ಸ್ವತಃ ಒತ್ತಡಕ್ಕೆ ಒಳಗಾಗಲಿದೆ. ರಾಹುಲ್ರಂತಹ ವಿಶ್ವದರ್ಜೆಯ ಆಟಗಾರ ನಮಗೆ ಮತ್ತಷ್ಟು ಆತ್ಮವಿಶ್ವಾಸ ಒದಗಿಸುವುದರಲ್ಲಿ ಸಂಶಯವೇ ಇಲ್ಲ’’ ಎಂದು ಗೌತಮ್ ಹೇಳಿದ್ದಾರೆ.
ಕಳೆದ ಎರಡು ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಸೆಮಿ ಫೈನಲ್ನಲ್ಲಿ ಮುಗ್ಗರಿಸಿದ್ದ ಕರ್ನಾಟಕ ಈ ಬಾರಿ ತನ್ನ ತಪ್ಪನ್ನು ತಿದ್ದುಕೊಳ್ಳುವತ್ತ ಚಿತ್ತವಿರಿಸಿದೆ. 2017ರಲ್ಲಿ ಈಡನ್ಗಾರ್ಡನ್ಸ್ನಲ್ಲಿ ವಿದರ್ಭ ವಿರುದ್ಧ ಸೆಮಿ ಫೈನಲ್ನಲ್ಲಿ ಕರ್ನಾಟಕ ಕೇವಲ 5 ರನ್ನಿಂದ ಸೋಲುಂಡಿತ್ತು. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಸೆಮಿ ಫೈನಲ್ನಲ್ಲಿ ಸೌರಾಷ್ಟ್ರಕ್ಕೆ ಶರಣಾಗಿತ್ತು.
‘‘ನಾವು ಕಳೆದ ಎರಡು ವರ್ಷಗಳಲ್ಲಿ ಎರಡು ಸೆಮಿ ಫೈನಲ್ ಪಂದ್ಯವನ್ನು ಅತ್ಯಂತ ನಿಕಟ ಪೈಪೋಟಿಯಲ್ಲಿ ಸೋತಿದ್ದೆವು. ನಾನು ಆ ಎರಡು ಪಂದ್ಯಗಳಲ್ಲಿ ಆಡಿದ್ದೆ. ಆ ಸೋಲು ನನಗೆ ತೀವ್ರ ನೋವುಂಟು ಮಾಡಿದೆ. ಇದೆ ವೇಳೆ ಆ ಸೋಲು ನಮಗೆ ಸಾಕಷ್ಟು ಪಾಠ ಕಲಿಸಿದೆ’’ ಎಂದು ಜಮ್ಮು-ಕಾಶ್ಮೀರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ 7 ವಿಕೆಟ್ ಗೊಂಚಲು ಪಡೆದು ಕರ್ನಾಟಕ ತಂಡಕ್ಕೆ 167 ರನ್ ಗೆಲುವಿಗೆ ನೆರವಾಗಿದ್ದ ಗೌತಮ್ ಹೇಳಿದ್ದಾರೆ.