ಮೋದಿ ಸರಕಾರದ ಮಹಿಳಾ ದಿನಾಚರಣೆಯ ಟ್ವೀಟ್ ಬಗ್ಗೆ 8 ವರ್ಷದ ಪರಿಸರ ಹೋರಾಟಗಾರ್ತಿಯ ಅಸಮಾಧಾನ
‘ನನ್ನ ಬಗ್ಗೆ ಸಂಭ್ರಮಿಸಬೇಡಿ’
ಫೈಲ್ ಚಿತ್ರ
ಹೊಸದಿಲ್ಲಿ, ಮಾ. 6: ತನ್ನನ್ನು ಪ್ರೇರಣೆ ನೀಡಿದ ವ್ಯಕ್ತಿ ಎಂದು ಗುರುತಿಸಿರುವುದಕ್ಕೆ 8 ವರ್ಷದ ಹವಾಮಾನ ಬದಲಾವಣೆ ಹೋರಾಟಗಾರ್ತಿ ಮಣಿಪುರದ ಲಿಸಿಪ್ರಿಯಾ ಕಂಗುಜಂ ನರೇಂದ್ರ ಮೋದಿ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ‘‘ಆತ್ಮೀಯ ನರೇಂದ್ರ ಮೋದಿ ಅವರೇ, ನೀವು ನನ್ನ ಮಾತನ್ನು ಆಲಿಸದೇ ಇದ್ದರೆ, ನನ್ನ ಬಗ್ಗೆ ಸಂಭ್ರಮಿಸಬೇಡಿ’’ ಎಂದು 2019ರ ಜಾಗತಿಕ ಮಕ್ಕಳ ಶಾಂತಿ ಪ್ರಶಸ್ತಿಗ್ಕೆ ಪಾತ್ರಳಾಗಿದ್ದ ಲಿಸಿಪ್ರಿಯಾ ಕಂಗುಜಂ ಟ್ವಿಟ್ಟರ್ನಲ್ಲಿ ಹೇಳಿದ್ದಾಳೆ.
ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ‘ಶಿ ಇನ್ಸ್ಪೈಯರ್ ಅಸ್’ (ಆಕೆ ನಮಗೆ ಸ್ಪೂರ್ತಿ) ಎಂಬ ಅಭಿಯಾನ ಆರಂಭಿಸಿದ್ದರು. ಬದುಕು ಹಾಗೂ ಕೊಡುಗೆ ಮೂಲಕ ಪ್ರೇರಣೆ ನೀಡಿದ ಮಹಿಳೆಯರಿಗೆ ತನ್ನ ಸಾಮಾಜಿಕ ಜಾಲ ತಾಣದ ಖಾತೆಯನ್ನು ಅಂದು ನರೇಂದ್ರ ಮೋದಿ ಅವರು ಮೀಸಲಿರಿಸಿದ್ದರು. ನಿಮ್ಮ ‘ಶಿ ಇನ್ಸ್ಪೈರ್ಸ್ ಅಸ್’ ಅಭಿಯಾನದ ಅಡಿಯಲ್ಲಿ ದೇಶದ ಪ್ರೇರಣೆ ನೀಡಿದ ಮಹಿಳೆಯರಲ್ಲಿ ನನ್ನನ್ನು ಗುರುತಿಸಿರುವುದಕ್ಕೆ ವಂದನೆಗಳು. ಹಲವು ಬಾರಿ ಚಿಂತಿಸಿದ ಬಳಿಕ ಈ ಗೌರವನ್ನು ಹಿಂದಿರುಗಿಸಲು ನಾನು ನಿರ್ಧರಿಸಿದೆ. ಜೈ ಹಿಂದ್ ಎಂದು ಲಿಸಿಪ್ರಿಯಾ ಕಂಜುಗಮ್ಳ ಟ್ವಿಟ್ಟರ್ ಹ್ಯಾಂಡಲ್ ಹೇಳಿದೆ. ಮಣಿಪುರ ನಿವಾಸಿಯಾಗಿರುವ ಲಿಸಿಪ್ರಿಯಾ ಕಂಗುಂಜಮ್ ಕಳೆದ ವರ್ಷ ಜೂನ್ನಲ್ಲಿ ಸಂಸತ್ತಿನ ಎದುರು ಹವಾಮಾನ ಬದಲಾವಣೆ ವಿರುದ್ಧ ಧ್ವನಿ ಎತ್ತಿದ್ದಳು.