ಅಬ್ದುಲ್ ಸಮದ್ ಭಾರತದ ಭವಿಷ್ಯದ ಫುಟ್ಬಾಲ್ ಸ್ಟಾರ್: ಭುಟಿಯಾ
ಭೈಚುಂಗ್ ಭುಟಿಯಾ
ಸಹಲ್ ಅಬ್ದುಲ್ ಸಮದ್
ಮುಂಬೈ, ಜೂ.2: ಭಾರತದ ಫುಟ್ಬಾಲ್ ತಂಡದ ಯುವ ಆಟಗಾರರಲ್ಲಿ ಒಬ್ಬರಾಗಿರುವ ಸಹಲ್ ಅಬ್ದುಲ್ ಸಮದ್ ಭಾರತದ ಭವಿಷ್ಯದ ಫುಟ್ಬಾಲ್ ತಾರೆಯಾಗಲಿದ್ದಾರೆ. ನಾಯಕ ಸುನೀಲ್ ಛೆಟ್ರಿ ನಿವೃತ್ತಿಯ ನಂತರ ದೇಶದ ಮುಂದಿನ ದೊಡ್ಡ ಸ್ಕೋರರ್ ಆಗಿ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಫುಟ್ಬಾಲ್ ಐಕಾನ್ ಭೈಚುಂಗ್ ಭುಟಿಯಾ ಹೇಳಿದ್ದಾರೆ.
ಕೇರಳ ಬ್ಲಾಸ್ಟರ್ಸ್ ತಂಡದ ಸ್ಟಾರ್ ಸಹಲ್ ಅಬ್ದುಲ್ ಸಮದ್ ಅವರ ಬಗ್ಗೆ ಭೈಚುಂಗ್ ಭುಟಿಯಾ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2019ರ ಕಿಂಗ್ಸ್ ಕಪ್ನಲ್ಲಿ ಪಾದಾರ್ಪಣೆ ಮಾಡಿದ ಸಮದ್ ಅವರು ಹೆಚ್ಚು ಲಿಂಕ್-ಅಪ್ ಆಗಿ ಆಡುತ್ತಿದ್ದಾರೆ - ಆಕ್ರಮಣಕಾರಿ ಮಿಡ್ಫೀಲ್ಡರ್ ಆಗಿರುವ ಅವರು ಗೋಲು ಬಾರಿಸುವ, ಹೊಡೆತಗಳನ್ನು ತೆಗೆದುಕೊಳ್ಳುವ ವಿಶ್ವಾಸವನ್ನು ಪ್ರಾರಂಭಿಸಬೇಕಾಗಿದೆ ಎಂದು ಭುಟಿಯಾ ಇಂಡಿಯನ್ ಸೂಪರ್ ಲೀಗ್ನ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಹೇಳಿದ್ದಾರೆ.
2016-17ರಲ್ಲಿ ಸಂತೋಷ್ ಟ್ರೋಫಿಯಲ್ಲಿ ಗಮನ ಸೆಳೆದ ಅಬ್ದುಲ್ ಸಮದ್ರನ್ನು ಕೇರಳ ಬ್ಲಾಸ್ಟರ್ಸ್ ಮುಂದಿನ ಋತುವಿನಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಅವರು 2018-19ರಲ್ಲಿ ಐಎಸ್ಎಲ್ ಉದಯೋನ್ಮುಖ ಆಟಗಾರ ಮತ್ತು ವರ್ಷದ ಎಐಎಫ್ಎಫ್ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾದರು.
‘‘ಒಮ್ಮೆ ಅವರು ಸ್ಕೋರ್ ಗಳಿಸಲು ಪ್ರಾರಂಭಿಸಿದರೆ, ಅವರು ಉತ್ತಮ ಫಿನಿಶರ್ ಆಗಬಹುದು. ಅವರು ಸುನಿಲ್ ಛೆಟ್ರಿ ಸ್ಥಾನವನ್ನು ತುಂಬಬಹುದು. ಅವರು ಭಾರತಕ್ಕೆ ಭವಿಷ್ಯದ ತಾರೆ’’ ಎಂದು 23 ವರ್ಷದ ಆಟಗಾರ ಸಮದ್ ಬಗ್ಗೆ ಭುಟಿಯಾ ಹೇಳಿದ್ದಾರೆ.
ಭುಟಿಯಾ ಬಳಿಕ ಸಂದೇಶ್ ಜಿಂಗಾನ್ ಅಥವಾ ಗುರ್ಪ್ರೀತ್ ಸಿಂಗ್ ಸಂಧು ತಂಡವನ್ನು ಮುನ್ನಡೆಸಬಲ್ಲ ಇಬ್ಬರು ಸಮರ್ಥ ಆಟಗಾರರಿದ್ದಾರೆ ಎಂದು ಭುಟಿಯಾ ಹೇಳಿದರು.
ಭಾರತದ ಫುಟ್ಬಾಲ್ ಆಟಗಾರರ ತಂತ್ರವನ್ನು ಅಭಿವೃದ್ಧಿಪಡಿಸಲು ಭುಟಿಯಾ ಸಲಹೆ ನೀಡಿದರು ಮತ್ತು ಯುರೋಪಿಯನ್ ಲೀಗ್ಗಳ ಮೇಲೆ ಕಣ್ಣಿಡುವ ಬದಲು ಏಶ್ಯನ್ ಕ್ಲಬ್ ಫುಟ್ಬಾಲ್ ನಲ್ಲಿ ಆಡುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿದರು.
‘‘ಯಾವಾಗಲೂ ಯುರೋಪಿಯನ್ ಲೀಗ್ಗಳಿಗೆ ಹೋಗುವ ಬಗ್ಗೆ ಯೋಚಿಸಬೇಡಿ. ನೀವು ಕತಾರ್ ಲೀಗ್, ಕೊರಿಯನ್ ಲೀಗ್, ಚೈನೀಸ್ ಲೀಗ್ ಅಥವಾ ಜಪಾನೀಸ್ ಲೀಗ್ನಲ್ಲಿ ಆಡುವ ಗುರಿಯನ್ನು ಹೊಂದಬಹುದು, ಯುಎಇ ಕೂಡ ಉತ್ತಮ ಕ್ಲಬ್ ಗುಣಮಟ್ಟವನ್ನು ಹೊಂದಿದೆ. ನಿಮಗೆ ಆತ್ಮವಿಶ್ವಾಸ ಸಿಗುತ್ತದೆ, ಬಹಳಷ್ಟು ಕಲಿಯಿರಿ,’’ ಎಂದು ಭುಟಿಯಾ ಅಭಿಪ್ರಾಯಪಟ್ಟರು.
‘‘ವಿದೇಶದಲ್ಲಿ ಆಡಲು ನಿಮ್ಮ ರಾಷ್ಟ್ರೀಯ ತಂಡವನ್ನು ಗುರುತಿಸಬೇಕು. ಐಪಿಎಲ್ನಲ್ಲಿ ನಾವು ಬ್ರೆಝಿಲ್ ಕ್ರಿಕೆಟಿಗರನ್ನು ಏಕೆ ಹೊಂದಿಲ್ಲ? ಯಾಕೆಂದರೆ ಅವರು ಕ್ರಿಕೆಟ್ ಆಡುವುದಿಲ್ಲ. ಅದೇ ರೀತಿ ಭಾರತದ ಬಗ್ಗೆ ಅವರು ಯೋಚಿಸುತ್ತಾರೆ. ಆದ್ದರಿಂದ ನಾವು ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಬೇಕಾಗಿದೆ. ನಾವು ಏಶ್ಯನ್ ಕಪ್ನಲ್ಲಿ ಕನಿಷ್ಠ ಕ್ವಾರ್ಟರ್ಫೈನಲ್ ಅಥವಾ ಸೆಮಿಫೈನಲ್ ಆಡಿದರೆ, ತಂಡದ ಆಟಗಾರರಿಗೆ ವಿದೇಶಿ ಕ್ಲಬ್ಗಳಲ್ಲಿ ಅವಕಾಶ ಒಲಿದು ಬರುತ್ತದೆ ’’ ಎಂದರು.