ಅಶ್ರಫ್ ಚಾಚಾ ನೆರವಿಗೆ ಧಾವಿಸಿದ ಸಚಿನ್ ತೆಂಡುಲ್ಕರ್
ಮುಂಬೈ , ಆ.21: ಆರೋಗ್ಯ ಸಮಸ್ಯೆ ಮತ್ತು ಹಣಕಾಸಿನ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿದ್ದ ಕ್ರೀಡಾ ಸಾಮಗ್ರಿಗಳ ಮಾರಾಟಗಾರ ಮುಂಬೈನ ಅಶ್ರಫ್ ಭಾಯ್ ನೆರವಿಗೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಧಾವಿಸಿದ್ದಾರೆ.
ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್, ದಕ್ಷಿಣ ಆಫ್ರಿಕದ ಎಫ್ ಡು ಪ್ಲೆಸಿಸ್, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ರಿಗೆ ಇದೇ ಅಶ್ರಫ್ ಬ್ಯಾಟ್ ಗಳನ್ನು ಮಾಡಿ ಕೊಟ್ಟಿದ್ದರು.
“ಸಹಾಯ ಮಾಡಲು ತೆಂಡುಲ್ಕರ್ ಮುಂದೆ ಬಂದಿದ್ದಾರೆ ಮತ್ತು ಅಶ್ರಫ್ ಚಾಚಾ ಜೊತೆ ಮಾತನಾಡಿದ್ದಾರೆ. ಆರ್ಥಿಕವಾಗಿಯೂ ಅವರು ನೆರವಾಗಿದ್ದಾರೆ” ಎಂದು ಅಶ್ರಫ್ ರ ಹಿತೈಷಿ ಪ್ರಶಾಂತ್ ಜೆಠ್ಮಲಾನಿ ಮಾಹಿತಿ ನೀಡಿದ್ದಾರೆ.
ಅಶ್ರಫ್ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಅಥವಾ ಐಪಿಎಲ್ ಪಂದ್ಯಗಳು ನಡೆಯುವ ವೇಳೆಗೆ ನಿರಂತರವಾಗಿ ಇರುತ್ತಿದ್ದರು.
ಕಳೆದ ಕೆಲವು ವಾರಗಳಿಂದ ಅಶ್ರಫ್ ಆರೋಗ್ಯ ಸಮಸ್ಯೆಗಳೊಂದಿಗೆ ಮುಂಬೈನ ಉಪನಗರ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅಶ್ರಫ್ ಚೌಧರಿ ಇದೀಗ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದರು.
ಪ್ರಶಾಂತ್ ಜೆಠ್ಮಲಾನಿ ಅವರು ಅಶ್ರಫ್ ರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತಿದ್ದಾರೆ.