ದುಬೈಗೆ ತೆರಳಿದ ಬಿಸಿಸಿಐ ಅದ್ಯಕ್ಷ
ಹೊಸದಿಲ್ಲಿ, ಸೆ.9: ಸೆಪ್ಟಂಬರ್ 19ರಿಂದ ದುಬೈನಲ್ಲಿ ಆರಂಭವಾಗಲಿರುವ ಹದಿಮೂರನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಬುಧವಾರ ದುಬೈಗೆ ತೆರಳಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟ್ವೆಂಟಿ-20 ಸ್ಪರ್ಧೆಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಗಳಿಂದಾಗಿ ಯುಎಇಯಲ್ಲಿ ಈ ಬಾರಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲಾಗಿದೆ. ಕಳೆದ 6 ತಿಂಗಳಲ್ಲಿ ಗಂಗುಲಿ ಮೊದಲ ಬಾರಿ ವಿಮಾನದ ಮೂಲಕ ದುಬೈಗೆ ತೆರಳುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿದ್ದ ಟ್ವೆಂಟಿ-20 ವಿಶ್ವಕಪ್ನ್ನು ಮುಂದೂಡಿದ ನಂತರ ಬಿಸಿಸಿಐ ಐಪಿಎಲ್ ಆಯೋಜಿಸುವ ಅವಕಾಶ ಪಡೆದಿದೆ. ಸಾಮಾನ್ಯವಾಗಿ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಈ ಪಂದ್ಯಾವಳಿಯು ಈ ವರ್ಷ ರದ್ದಾಗಿದ್ದರೆ ಮಂಡಳಿಗೆ 4,000 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇತ್ತು. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈಗಾಗಲೇ ದುಬೈ ಸೇರಿದ್ದಾರೆ.
ಪಂದ್ಯಾವಳಿಯ ಕಟ್ಟುನಿಟ್ಟಾದ ಆರೋಗ್ಯ ಸುರಕ್ಷತಾ ಕ್ರಮಗಳ ಹೊರತಾಗಿಯೂ ಆಟಗಾರಿಗೆ ಕೋವಿಡ್ ಸೋಂಕು ಭೀತಿ ಇದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೋವಿಡ್ ಸೋಂಕು ತಗಲಿದೆ. ಇವರೆಲ್ಲಾ ಕ್ವಾರಂಟೈನ್ನಲ್ಲಿದ್ದಾರೆ .
ಪಂದ್ಯ ಆರಂಭವಾದ ಬಳಿಕ ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅಭಿಮಾನಿಗಳಿಗೆ ಅನುಮತಿ ನೀಡಲಾಗುವುದಿಲ.್ಲ ಆದರೆ ಕೋವಿಡ್-19 ಪರಿಸ್ಥಿತಿಯ ಪರಿಶೀಲನೆಯ ನಂತರ ಪಂದ್ಯಾವಳಿಯ ನಂತರದ ಹಂತಗಳಲ್ಲಿ ಕೆಲವು ಜನಸಮೂಹಕ್ಕೆ ಅನುಮತಿ ದೊರೆಯಬಹುದು. ಈ ಟೂರ್ನಿಯು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.