‘ಅಂಪೈರ್ ಮ್ಯಾನ್ ಆಫ್ ದಿ ಮ್ಯಾಚ್ ಆಗಬೇಕಿತ್ತು ’
ಡೆಲ್ಲಿ -ಪಂಜಾಬ್ ಪಂದ್ಯದಲ್ಲಿ ವಿವಾದ ಸೃಷ್ಟಿಸಿದ ಅಂಪೈರ್ ಬಗ್ಗೆ ಸೆಹ್ವಾಗ್ ವ್ಯಂಗ್ಯ
ದುಬೈ,: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಸಂದರ್ಭದಲ್ಲಿ ಆನ್-ಫೀಲ್ಡ್ ಅಂಪೈರ್ ನೀಡಿರುವ ನಿರ್ಧಾರ ವಿವಾದವನ್ನುಂಟು ಮಾಡಿದ್ದು, ಮಾಜಿ ಕ್ರಿಕೆಟಿಗರು ಅಂಪೈರ್ರ ವಿವಾದಾಸ್ಪದ ನಿರ್ಧಾರವನ್ನು ಟೀಕಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ನಿನ್ನೆಯ ಪಂದ್ಯದಲ್ಲಿ ವಿವಾದಾಸ್ಪದ ತೀರ್ಪಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವಿನ ಸವಾಲನ್ನು ಬೆನ್ನಟ್ಟುತ್ತಿದ್ದ ವೇಳೆ ಈ ವಿವಾದ ಉಂಟಾಗಿದೆ. 19ನೇ ಓವರ್ನಲ್ಲಿ ಮಾಯಾಂಕ್ ಅಗರ್ವಾಲ್ ಅವರು ಕ್ರಿಸ್ ಜೋರ್ಡನ್ ಜೊತೆಗೆ ಎರಡು ರನ್ಗೆ ಪ್ರಯತ್ನ ನಡೆಸಿದ್ದರು. ಆದರೆ ಜೋರ್ಡನ್ ಬ್ಯಾಟ್ನ್ನು ಕ್ರೀಸ್ ಒಳಗೆ ಇಟ್ಟಿಲ್ಲ ಎಂಬ ಲೆಕ್ಕಾಚಾರದಲ್ಲಿ ಆನ್ಫೀಲ್ಡ್ ಅಂಪೈರ್ ನಿತಿನ್ ಮೆನನ್ ಇದನ್ನು ಸಿಂಗಲ್ ಎಂದು ಪರಿಗಣಿಸಿ ತೀರ್ಪು ನೀಡಿದರು. ಆದರೆ ಜೋರ್ಡನ್ ಕ್ರೀಸ್ನ ಒಳಗೆ ಬ್ಯಾಟ್ ಇಟ್ಟಿರುವುದು ಟಿವಿ ವೀಡಿಯೊದ ರಿಪ್ಲೇಯಲ್ಲಿ ಸ್ಪಷ್ಟಗೊಂಡಿತ್ತು. ಆದರೆ ಅಂಪೈರ್ ನಿತಿನ್ ಮೆನನ್ ತಪ್ಪು ಲೆಕ್ಕಾಚಾರದಲ್ಲಿ ಒಂದು ರನ್ ಕಡಿಮೆ ನೀಡಿರುವುದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ನಿಗದಿಪಡಿಸಿದ 20 ಓವರ್ಗಳಲ್ಲಿ ಉಭಯ ತಂಡಗಳು 157 ರನ್ ಗಳಿಸಿದ ಕಾರಣದಿಂದಾಗಿ ಪಂದ್ಯ ಟೈ ಆಗಿ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್ನ ಮೊರೆ ಹೋಗಬೇಕಾಯಿತು. ಸೂಪರ್ ಓವರ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲು ಅನುಭವಿಸಿತು. ಹಿಂದೆ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ವೀರೇಂದ್ರ ಸೆಹ್ವಾಗ್ ಅವರು ಕಳೆದ ಪಂದ್ಯದಲ್ಲಿ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿಗೆ ಆಯ್ಕೆ ಸರಿಯಾಗಿಲ್ಲ. ಅಂಪೈರ್ಗೆ ಇದನ್ನು ನೀಡಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ.