ಲೋಧಾ ಸಮಿತಿಯ 3ನೆ ಯಥಾಸ್ಥಿತಿ ವರದಿಯ ವಿಚಾರಣೆ ಮುಂದೂಡಿದ ಸುಪ್ರೀಂ
ಹೊಸದಿಲ್ಲಿ, ಡಿ.5: ಲೋಧಾ ಸಮಿತಿಯು ಸಲ್ಲಿಸಿದ್ದ ಮೂರನೆ ಯಥಾ ಸ್ಥಿತಿ ವರದಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಡಿಸೆಂಬರ್ 9ಕ್ಕೆ ಮುಂದೂಡಿದೆ.
ಲೋಧಾ ಸಮಿತಿಯು ಸಲ್ಲಿಸಿದ್ದ ಮೂರನೆ ಯಥಾ ಸ್ಥಿತಿ ವರದಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ನಡೆಸುವುದಾಗಿ ನಿಗದಿಯಾಗಿತ್ತು. ಬಿಸಿಸಿಐ ಮತ್ತು ಅದರ ರಾಜ್ಯ ಘಟಕಗಳ ಪದಾಧಿಕಾರಿಗಳ ವಯೋಮಿತಿಯು ಅರ್ಹತಾ ಮಾನದಂಡಗಳಿಗೆ ಹೊಂದಿಕೆಯಾಗುತ್ತಿಲ್ಲ. ಈ ಕಾರಣದಿಂದಾಗಿ ಅಂತಹವರನ್ನು ಅನರ್ಹಗೊಳಿಸುವಂತೆ ಲೋಧಾ ಸಮಿತಿಯು ಸುಪ್ರೀಂ ಕೋರ್ಟ್ಗೆ ನ.21ರಂದು ಸಲ್ಲಿಸಿದ 3ನೆ ಯಥಾಸ್ಥಿತಿ ವರದಿಯಲ್ಲಿ ತಿಳಿಸಿತ್ತು.
ಇದೇ ವೇಳೆ ಲೋಧಾ ಸಮಿತಿಯು ತನ್ನ ವರದಿಯಲ್ಲಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ವೀಕ್ಷಕರಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿತ್ತು.
ಶುಕ್ರವಾರ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಲೋಧಾ ಸಮಿತಿಯ ವರದಿಯ ಪ್ರಮುಖ ಶಿಫಾರಸುಗಳ ಅನುಷ್ಠಾನದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಮೂರು ರಾಜ್ಯ ಘಟಕಗಳ ಸಮಿತಿಯನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯ ಸಮಿತಿಗಳು ಪ್ರಮುಖ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದವು.
ಪದಾಧಿಕಾರಿಗಳ ಗರಿಷ್ಠ ವಯೋಮತಿ 70 ವರ್ಷ, ಪದಾಧಿಕಾರಿಯಾಗಿ ಅಧಿಕಾರದ ಅವಧಿ ಪೂರ್ಣಗೊಳಿಸಿದವರು ಮರು ಆಯ್ಕೆ ಬಯಸುವಂತಿಲ್ಲ ಮತ್ತು ಮೂರು ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿಯಬೇಕು. ಒಂದು ರಾಜ್ಯಕ್ಕೆ ಒಂದು ಮತ ಚಲಾಯಿಸುವ ಹಕ್ಕು ಎಂಬ ಮೂರು ಶಿಫಾರಸುಗಳನ್ನು ಲೋಧಾ ಸಮಿತಿ ಮಾಡಿತ್ತು. ಬಿಸಿಸಿಐ ಶುಕ್ರವಾರ ನಡೆದ ಎಸ್ಜಿಎಂನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೂ, ಸುಪ್ರೀಂ ಕೋರ್ಟ್ನ ಆದೇಶ ತಮ್ಮ ಪರ ಬಾರದಿದ್ದರೆ ‘ಬಿ’ ಯೋಜನೆಯನ್ನು ಸಿದ್ಧವಾಗಿರಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಿತ್ತು.