ಬಹಿರಂಗ ಪತ್ರದ ಮೂಲಕ ಎಐಟಿಎ ಟೀಕಿಸಿದ ಸೋಮ್ದೇವ್
ಹೊಸದಿಲ್ಲಿ, ಜ.18: ಭಾರತದ ಡೇವಿಸ್ಕಪ್ ತಂಡದ ಸದಸ್ಯ 19ರ ಹರೆಯದ ಸುಮಿತ್ ನಗಾಲ್ರನ್ನು ತಂಡದಿಂದ ಕೈಬಿಟ್ಟ ಕಾರಣವನ್ನು ಬಹಿರಂಗವಾಗಿ ಹೇಳಿದ್ದ ಎಐಟಿಎ ಪ್ರಧಾನ ಕಾರ್ಯದರ್ಶಿ ಹೀರೊನ್ಮಾಯ್ ಚಟರ್ಜಿಯ ನಿಲುವನ್ನು ನಿವೃತ್ತ ಟೆನಿಸ್ ಆಟಗಾರ ಸೋಮ್ದೇವ್ ದೇವ್ವರ್ಮನ್ ಎಐಟಿಎಗೆ ಬಹಿರಂಗ ಪತ್ರ ಬರೆಯುವ ಮೂಲಕ ಖಂಡಿಸಿದ್ದಾರೆ.
ಗಂಭೀರ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಫೆಬ್ರವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಡೇವಿಸ್ ಕಪ್ ಪಂದ್ಯದಿಂದ ನಗಾಲ್ರನ್ನು ಕೈಬಿಡಲಾಗಿತ್ತು. ಕಳೆದ ವರ್ಷ ಸ್ಪೇನ್ ವಿರುದ್ಧದ ಡೇವಿಸ್ಕಪ್ ಪಂದ್ಯದ ವೇಳೆ ಹೊಟೇಲ್ ರೂಮ್ನ್ನು ಮಿನಿ-ಬಾರ್ ಆಗಿ ಪರಿವರ್ತಿಸಿದ್ದ ನಗಾಲ್ ಅದೇ ಗುಂಗಿನಲ್ಲಿ ಬೆಳಗ್ಗಿನ ಅವಧಿಯ ಅಭ್ಯಾಸಕ್ಕೆ ಚಕ್ಕರ್ ಹಾಕಿದ್ದರು. ದಿಲ್ಲಿಯಲ್ಲಿ ನಡೆದ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಅನುಮತಿಯಿಲ್ಲದೇ ಗರ್ಲ್ಫ್ರೆಂಡ್ನ್ನು ಕರೆದುಕೊಂಡ ಆರೋಪವೂ ನಗಾಲ್ ಮೇಲಿತ್ತು ಎಂದು ಎಐಟಿಎ ಮೂಲಗಳು ತಿಳಿಸಿವೆ.
ನಗಾಲ್ಗೆ ಬೆನ್ನಿಗೆ ನಿಂತ ಸೋಮ್ದೇವ್‘‘ಇದು ಚಟರ್ಜಿ ಮಾಡಿರುವ ಆರೋಪವಾಗಿದೆ. ಸಾರ್ವಜನಿಕವಾಗಿ ಇಂತಹ ಆರೋಪ ಮಾಡಿರುವ ಹಿಂದಿನ ಉದ್ದೇಶ ಏನಿತ್ತು. ಈ ಆರೋಪದಿಂದ ನಮ್ಮ ಯುವ ಆಟಗಾರ ನಗಾಲ್ಗೆ ಕೆಟ್ಟ ಹೆಸರು ತರಲಾಗಿದೆ. ನೀವು ಸುಮಿತ್ಗೆ ಪಾಠ ಕಲಿಸಲು ಬಯಸಿದ್ದೀರಾ? ಈ ಮೂಲಕ ಮಾದರಿಯಾಗಲು ಇಚ್ಛಿಸಿದ್ದೀರಾ?ಮುಂಬರುವ ಡೇವಿಸ್ಕಪ್ಗೆ ಕೇವಲ 5 ಆಟಗಾರರನ್ನು ಆಯ್ಕೆ ಮಾಡಿ ನಿಮ್ಮ ಆಯ್ಕೆ ಸಮಿತಿಯ ಕಳಪೆ ನಿರ್ಧಾರವನ್ನು ಮುಚ್ಚುಮರೆ ಮಾಡಲು ಯತ್ನಿಸುತ್ತಿದ್ದೀರಾ? ಎಂದು ಎಐಟಿಎಗೆ ಬರೆದ ಪತ್ರದಲ್ಲಿ ದೇವ್ವರ್ಮನ್ ಪ್ರಶ್ನಿಸಿದ್ದಾರೆ.
‘‘ಸುಮಿತ್ ನಗಾಲ್ ನಡವಳಿಕೆ ಖಂಡಿತವಾಗಿಯೂ ಸರಿಯಿಲ್ಲ. ಆದರೆ, ಆತ ಕಠಿಣ ಪರಿಶ್ರಮಿ. ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ನಮ್ಮ ದೇಶದ ಅದ್ಭುತ ಆಟಗಾರನಾಗುವ ಸಾಮರ್ಥ್ಯ ಅವರಿಗಿದೆ. ಸುಮಿತ್ ಆತನ ವಿರುದ್ಧ ಮಾಡಿರುವ ಎಲ್ಲ ಆರೋಪವನ್ನು ನಿರಾಕರಿಸಿದ್ದಾರೆೆ. ಹಿರಿಯ ಆಟಗಾರರು ಹಾಗೂ ಎಐಟಿಎ ಪ್ರತಿನಿಧಿಗಳ ಸಮ್ಮುಖದಲ್ಲಿ ವೃತ್ತಿಪರ ಮಾರ್ಗದಲ್ಲಿ ವಿಷಯವನ್ನು ಬಗೆಹರಿಸಬಹುದಿತ್ತು’’ ಎಂದು ಈ ತಿಂಗಳಾರಂಭದಲ್ಲಿ ನಿವೃತ್ತಿಯಾಗಿರುವ ಸೋಮ್ದೇವ್ ಅಭಿಪ್ರಾಯಪಟ್ಟಿದ್ದಾರೆ.
ಸುಮಿತ್ ನಗಾಲ್ 2015ರಲ್ಲಿ ವಿಂಬಲ್ಡನ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಖ್ಯಾತಿ ಪಡೆದಿದ್ದರು.