ಐಪಿಎಲ್ ನಲ್ಲಿ ಕಡೆಗಣಿಸಲ್ಪಟ್ಟ ಇರ್ಫಾನ್ ಪಠಾಣ್ ವಿಶೇಷ ಪ್ರತಿಕ್ರಿಯೆ
ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವ ಮಾತು
ಬೆಂಗಳೂರು, ಫೆ.21: ಆಲ್ರೌಂಡರ್ ಇರ್ಫಾನ್ ಪಠಾಣ್ 10ನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜಿನ ವೇಳೆ ವಿವಿಧ ಫ್ರಾಂಚೈಸಿ ತಂಡಗಳಿಂದ ಕಡೆಗಣಿಸಲ್ಪಟ್ಟು ಹರಾಜಾಗದೆ ಉಳಿದಿರುವುದು ಅಭಿಮಾನಿಗಳ ಪಾಲಿಗೆ ಅಚ್ಚರಿ ಮೂಡಿಸಿತ್ತು. ಆದರೆ ಇದರಿಂದ ಪಠಾಣ್ ವಿಚಲಿತರಾಗಿಲ್ಲ. ತನ್ನನ್ನು ಕಡೆಗಣಿಸಿದಕ್ಕೆ ಬೇಸರಿಸಿಕೊಂಡಿರುವ ಅಭಿಮಾನಿಗಳಿಗೆ ಅವರು ಭಾವಪೂರ್ಣ ಸಂದೇಶ ರವಾನಿಸಿದ್ದಾರೆ.
‘‘2010ರಲ್ಲಿ ನಾನು ಗಾಯದ ಸಮಸ್ಯೆ ಎದುರಿಸುತ್ತಿದ್ದೆ. ಐದು ಮೂಳೆಯಲ್ಲಿ ಐದು ಕಡೆ ಮುರಿದಿತ್ತು. ನನ್ನನ್ನು ಪರೀಕ್ಷಿಸಿದ ವೈದ್ಯರು ಇನ್ನೂ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ. ಕ್ರಿಕೆಟ್ ಆಡುವ ಕನಸನ್ನು ಬಿಟ್ಟು ಬಿಡು ಎಂದರು. ಆದರೆ ನಾನು ಅವರಲ್ಲಿ ‘‘ನಾನು ಎಷ್ಟೇ ನೋವನ್ನು ಅನುಭವಿಸುವೆನು. ಆದರೆ ದೇಶಕ್ಕಾಗಿ ಸುಂದರ ಕ್ರಿಕೆಟ್ ಆಡದೆ ಇರುವ ನೋವನ್ನು ಸಹಿಸಲಾರೆ ’’ಎಂದು ಅವರಲ್ಲಿ ಹೇಳಿದ್ದೆ ‘‘ ನಾನು ಕಠಿಣ ಪರಿಶ್ರಮದ ಮೂಲಕ ಕ್ರಿಕೆಟ್ಗೆ ವಾಪಸಾದೆ. ಇದರ ಜೊತೆಗೆ ಟೀಮ್ ಇಂಡಿಯಾಕ್ಕೆ ವಾಪಸಾದೆ. ನನ್ನ ವೃತ್ತಿ ಬದುಕಿನಲ್ಲಿ ಹಲವು ಅಡೆತಡೆಗಳು ಎದುರಾಗಿತ್ತು. ಅವೆಲ್ಲವನ್ನು ಎದುರಿಸಿರುವೆನು’’ ಎಂದು ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.