ಬಿಸಿಸಿಐ ನಿಯೋಗ ಇಂದು ದುಬೈಗೆ
ಮುಂಬೈ, ಮೇ 27: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಇಸಿಬಿ) ಸದಸ್ಯರೊಂದಿಗೆ ಮಾತುಕತೆ ನಡೆಸಲು ಬಿಸಿಸಿಐ ನಿಯೋಗ ರವಿವಾರ ದುಬೈಗೆ ಪ್ರಯಾಣ ಬೆಳೆಸಲಿದೆ.
ಪ್ರಸ್ತುತ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸದ್ಯಕ್ಕೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುವ ಸಾಧ್ಯತೆಯಿಲ್ಲ. ಈ ಸರಣಿಗೆ ಉಭಯ ದೇಶದ ಸರಕಾರದ ಅನುಮತಿ ಸಿಗುವ ನಿರೀಕ್ಷೆಯೂ ಇಲ್ಲ.
ಪಿಸಿಬಿಯ ಕಾನೂನು ನಡೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸದೇ ಇರಲು ಬಯಸಿರುವ ಬಿಸಿಸಿಐ ಮಾತುಕತೆ ಮುಂದಾಗಿದೆ ಎನ್ನಲಾಗಿದೆ. ಉಭಯ ಕ್ರಿಕೆಟ್ ಮಂಡಳಿಗಳ ಒಪ್ಪಂದದ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ತನಗೆ 70 ಮಿಲಿಯನ್ ಡಾಲರ್ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಬಿಸಿಸಿಐಗೆ ಕಾನೂನು ನೋಟಿಸ್ ಜಾರಿಗೊಳಿಸಿತ್ತು.
ಭಾರತದ ನಿಯೋಗದಲ್ಲಿ ಅಮಿತಾಭ್ ಚೌಧರಿ, ರಾಹುಲ್ ಜೊಹ್ರಿ ಹಾಗೂ ಎಂ.ವಿ. ಶ್ರೀಧರ್ ಅವರಲ್ಲದೆ ಓರ್ವ ವಕೀಲರಿದ್ದಾರೆ.
‘‘ಪಾಕಿಸ್ತಾನದೊಂದಿಗೆ ಆಡಲು ಅನುಮತಿ ಕೋರಿ ಮೂರು ತಿಂಗಳ ಹಿಂದೆಯೇ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. 15 ದಿನಗಳ ಹಿಂದೆ ಮತ್ತೊಮ್ಮೆ ಪತ್ರ ಬರೆದು ಜ್ಞಾಪಿಸಿದ್ದೇವೆ. ಈವರೆಗೆ ಯಾವುದೇ ಉತ್ತರವನ್ನು ಪಡೆದಿಲ್ಲ. ಪಾಕಿಸ್ತಾನದೊಂದಿಗೆ ಆಡಬೇಕೇ, ಬೇಡವೇ ಎನ್ನುವುದನ್ನು ಸರಕಾರವೇ ನಿರ್ಧರಿಸಬೇಕಾಗಿದೆ’’ ಎಂದು ನ್ಯೂಸ್ ಏಜೆನ್ಸಿಯೊಂದಕ್ಕೆ ಚೌಧರಿ ತಿಳಿಸಿದ್ದಾರೆ.