ಕುಂಬ್ಳೆ ರಾಜೀನಾಮೆಗೆ ಕೊಹ್ಲಿ ಕಾರಣ: ಗವಾಸ್ಕರ್
ಹೊಸದಿಲ್ಲಿ, ಜು.21: ''ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ಅವರ ಭಿನ್ನಾಭಿಪ್ರಾಯದ ಕುರಿತು ನನಗೆ ಅಷ್ಟೊಂದು ತಿಳಿದಿಲ್ಲ. ಆದರೆ ಇದು ಭಾರತೀಯ ಕ್ರಿಕೆಟ್ಗೆ ನಿಜಕ್ಕೂ ಬೇಸರದ ದಿನವಾಗಿದೆ. ನಾಯಕ ಕೊಹ್ಲಿ ಅವರು ಕುಂಬ್ಳೆಯನ್ನು ಬಲವಂತವಾಗಿ ಹೊರಹಾಕಿದ್ದಾರೆ'' ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಅನಿಲ್ ಕುಂಬ್ಳೆ ಮಂಗಳವಾರ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.
''ಕುಂಬ್ಳೆ ಭಾರತದ ಕೋಚ್ ಆಗಿ ಆಯ್ಕೆಯಾದ ಬಳಿಕ ಉತ್ತಮ ಸಾಧನೆ ಮಾಡಿತ್ತು. ಒಂದು ವರ್ಷದಲ್ಲಿ ಕುಂಬ್ಳೆ ಯಾವ ತಪ್ಪನ್ನೂ ಮಾಡಿದ್ದನ್ನು ನಾನು ನೋಡಿಲ್ಲ. ಅನಿಲ್ ರಾಜೀನಾಮೆಯ ಹಿಂದೆ 'ಸ್ಪಷ್ಟ ಕಾರಣ'ವೊಂದಿದೆ. ಸಿಎಸಿ ಸಮಿತಿಯು ಕುಂಬ್ಳೆ ಅವರ ಮೇಲೆ ವಿಶ್ವಾಸವಿರಿಸಿದ ಬಳಿಕ ಅವರು ಕೋಚ್ ಆಗಿ ಮುಂದುವರಿಯುತ್ತಾರೆಂಬ ವಿಶ್ವಾಸವಿತ್ತು. ಆದರೆ, ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಗಲ್ಲಕ್ಕೆ ಗಾಯವಾಗಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ದಿಟ್ಟ ಹೋರಾಟ ನೀಡಿ ಗಮನ ಸೆಳೆದಿದ್ದ ಕುಂಬ್ಳೆ ಇಷ್ಟು ಸುಲಭವಾಗಿ ಹುದ್ದೆಯನ್ನು ತ್ಯಜಿಸಿದ್ದನ್ನು ನೋಡಿ ಅಚ್ಚರಿಯಾಗಿದೆ'' ಎಂದು ಗವಾಸ್ಕರ್ ನುಡಿದರು.