ವ್ಯಕ್ತಿಗಿಂತ ತಂಡವೇ ಹಿರಿದು: ರವಿ ಶಾಸ್ತ್ರಿ
ಹೊಸದಿಲ್ಲಿ, ಜು.19: ವ್ಯಕ್ತಿಗಿಂತ ತಂಡವೇ ಅತ್ಯಂತ ದೊಡ್ಡದು. ತಾನಾಗಲಿ, ಅನಿಲ್ ಕುಂಬ್ಳೆ ಅವರಾಗಲಿ ಇಂದು ಬರುತ್ತೇವೆ, ನಾಳೆ ಹೋಗುತ್ತೇವೆ. ಅಂತಿಮವಾಗಿ ತಂಡದ ಹಿತಾಸಕ್ತಿ ಅತ್ಯಂತ ಮುಖ್ಯವಾಗುತ್ತದೆ ಎಂದು ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಪಂದ್ಯ ಆಡುವಾಗ ನಮ್ಮ ಮನಸ್ಸು ಶಾಂತವಾಗಿರಬೇಕಾಗುತ್ತದೆ. ಉತ್ತಮ ಸಹಾಯಕ ಸಿಬ್ಬಂದಿ ಇದ್ದರೆ ಮಾತ್ರ ಇದು ಸಾಧ್ಯ. ಪ್ರತಿ ಆಟಗಾರನ ಮನಸ್ಸು ಚೆನ್ನಾಗಿಡುವುದು ನನ್ನ ಕರ್ತವ್ಯ ಎಂದು ಶಾಸ್ತ್ರಿ ಹೇಳಿದರು.
ತನ್ನ ಸಹಪಾಠಿ ಭರತ್ ಅರುಣ್ರನ್ನು ಬೌಲಿಂಗ್ ಕೋಚ್ರನ್ನಾಗಿ ಆಯ್ಕೆ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ಶಾಸ್ತ್ರಿ, ಕೋಚ್ ಆಗಿ ಅವರ ದಾಖಲೆ ಉತ್ತಮವಾಗಿದೆ. ಅವರಿಗೆ 15 ವರ್ಷಗಳ ಕಾಲ ಕೋಚಿಂಗ್ ನೀಡಿದ ಅನುಭವವಿದೆ. ಅವರು ಎ ತಂಡಗಳು, ಅಂಡರ್-19 ತಂಡಗಳು, ಜೂನಿಯರ್ ವಿಶ್ವಕಪ್ ತಂಡಗಳಲ್ಲಿ ಕೋಚ್ ಆಗಿದ್ದಾರೆ ಎಂದರು.
ನನಗೆ ಹೆಚ್ಚುವರಿ ಒತ್ತಡವಿಲ್ಲ: ಕೊಹ್ಲಿ
ನನಗೆ ಯಾವುದೇ ಹೆಚ್ಚಿನ ಒತ್ತಡವಿಲ್ಲ. ಈ ತನಕ ನಡೆದಿರುವ ಘಟನೆ ನೆನಪಿಸಿಕೊಳ್ಳುವುದಿಲ್ಲ. ನಾನು ಹೆಚ್ಚುವರಿ ಒತ್ತಡ ಹಾಕಿಕೊಳ್ಳದೇ ನನ್ನ ಕೆಲಸ ಮಾಡುವೆ. ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೊಂದಾಣಿಕೆಯಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೊಲಂಬೊಕ್ಕೆ ಪ್ರವಾಸ ಕೈಗೊಂಡಿರುವ ಭಾರತ ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್, ಐದು ಏಕದಿನ ಹಾಗು ಏಕೈಕ ಟ್ವೆಂಟಿ-20 ಪಂದ್ಯವನ್ನಾಡಲಿದೆ. ಶ್ರೀಲಂಕಾ ಪ್ರವಾಸ ಜು.26 ರಿಂದ ಆರಂಭವಾಗಿ ಸೆ.6ರ ತನಕ ನಡೆಯಲಿದೆ.