ಭಾರತ ವಿರುದ್ಧದ 2011ರ ವಿಶ್ವಕಪ್ ಫೈನಲ್ ಪಂದ್ಯ ತನಿಖೆ: ಶ್ರೀಲಂಕಾ ಕ್ರೀಡಾ ಸಚಿವರ ಸುಳಿವು
ಕೊಲಂಬೊ, ಜು.19: ಭಾರತ ವಿರುದ್ಧ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿರುವ ನಡುವೆಯೇ ಈ ಪಂದ್ಯವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಶ್ರೀಲಂಕಾದ ಕ್ರೀಡಾ ಸಚಿವರು ತಿಳಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ವಿರುದ್ಧ 6 ವಿಕೆಟ್ಗಳಿಂದ ಸೋತಿತ್ತು. ಈ ಸೋಲಿನ ನೈತಿಕ ಹೊಣೆಹೊತ್ತು ಕುಮಾರ ಸಂಗಕ್ಕರ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶ್ರೀಲಂಕಾ ತಂಡ ಫೈನಲ್ ಪಂದ್ಯವನ್ನು ಉದ್ದೇಶಪೂರ್ವಕವಾಗಿ ಸೋತಿದೆ ಎಂದು ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಹಾಗೂ ಮಾಜಿ ನಾಯಕ ಅರ್ಜುನ್ ರಣತುಂಗಾ ಇತ್ತೀಚೆಗೆ ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪಂದ್ಯ ಸೋತಿದ್ದೇಗೆ ಎಂಬ ಕುರಿತು ತನಿಖೆ ನಡೆಸುವಂತೆ ಕೂಗು ಕೇಳಲಾರಂಭಿಸಿತ್ತು.
2011ರ ವಿಶ್ವಕಪ ಫೈನಲ್ ಪಂದ್ಯ ವಿರುದ್ಧದ ಫಿಕ್ಸಿಂಗ್ ಆರೋಪ ತನಿಖೆಗೆ ಅರ್ಹವಾಗಿದೆ. ಲಿಖಿತ ದೂರು ಸ್ವೀಕರಿಸಿದ ತಕ್ಷಣ ತನಿಖೆ ಆರಂಭಿಸಲಾಗುವುದು ಎಂದು ಶ್ರೀಲಂಕಾದ ಕ್ರೀಡಾ ಸಚಿವರಾದ ದಯಸಿರಿ ಜಯಸೇಕರ ಕೊಲಂಬೊದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
2011ರ ವಿಶ್ವಕಪ್ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 6 ವಿಕೆಟ್ಗಳ ನಷ್ಟಕ್ಕೆ 274 ರನ್ ಗಳಿಸಿತ್ತು. ಭಾರತ ರನ್ ಚೇಸಿಂಗ್ನ ವೇಳೆ ಸ್ಟಾರ್ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ರನ್ನು 18 ರನ್ಗೆ ಕಳೆದುಕೊಂಡಾಗ ಶ್ರೀಲಂಕಾ ಗೆಲುವಿನ ಹಂತದಲ್ಲಿತ್ತು. ಆದರೆ, ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್ನಿಂದಾಗಿ ಪಂದ್ಯವನ್ನು ಕೈಚೆಲ್ಲಿತ್ತು.