ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಆ.4ರಂದು ಆರಂಭ
ಭಾರತದ ಜಾವೆಲಿನ್ ಎಸೆತಗಾರ ನೀರಜ್ ಮೇಲೆ ವಿಶ್ವಾಸ
ಲಂಡನ್, ಆ.3: ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಶುಕ್ರವಾರ ಇಲ್ಲಿ ಆರಂಭವಾಗಲಿದ್ದು, ‘ಓಟದ ರಾಜ’ಉಸೇನ್ ಬೋಲ್ಟ್ ಈ ಟೂರ್ನಿಯ ಬಳಿಕ ನಿವೃತ್ತಿಯಾಗಲಿದ್ದಾರೆ.
ಭಾರತದ 25 ಅಥ್ಲೀಟ್ಗಳು ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಜೂನಿಯರ್ ಟೂರ್ನಿಯಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭರವಸೆ ಮೂಡಿಸಿದ್ದಾರೆ.
ಆಗಸ್ಟ್ 10 ಹಾಗೂ 12 ರಂದು ಜಾವೆಲಿನ್ ಸ್ಪರ್ಧೆಯ ಅರ್ಹತಾ ಸುತ್ತು ಹಾಗೂ ಫೈನಲ್ ಪಂದ್ಯಗಳು ನಡೆಯಲಿದ್ದು, ಆ ದಿನ ಹರ್ಯಾಣದ 19ರ ಹರೆಯದ ಅಥ್ಲೀಟ್ ನೀರಜ್ 2003ರಿಂದ ಭಾರತ ಎದುರಿಸುತ್ತಿರುವ ಪದಕದ ಬರ ನೀಗಿಸಲು ಪ್ರಯತ್ನಿಸಲಿದ್ದಾರೆ.
1983ರಲ್ಲಿ ಚಾಂಪಿಯನ್ಶಿಪ್ ಆರಂಭವಾದ ಬಳಿಕ ಪ್ರತಿ ಬಾರಿಯೂ ಭಾರತ ಟೂರ್ನಿಯಲ್ಲಿ ಭಾಗವಹಿಸಿದೆ. ಲೆಜಂಡರಿ ಲಾಂಗ್ಜಂಪ್ ತಾರೆ ಅಂಜು ಬಾಬ್ಬಿ ಜಾರ್ಜ್ 2003ರಲ್ಲಿ ಪ್ಯಾರಿಸ್ನಲ್ಲಿ ನಡೆದಿದ್ದ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿದ್ದರು. ಇದು ಜಾಗತಿಕ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಜಯಿಸಿರುವ ಏಕೈಕ ಪದಕವಾಗಿದೆ.
ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಥ್ಲೀಟ್ಗಳು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಚೀನಾ, ಜಪಾನ್, ಕತರ್ ಹಾಗೂ ಬಹರೈನ್ನ ಕೆಲವು ಪ್ರಮುಖ ಅಥ್ಲೀಟ್ಗಳು ಏಷ್ಯನ್ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದ ಹಿನ್ನೆಲೆಯಲ್ಲಿ ಭಾರತದ ಸಾಧನೆ ಹೆಚ್ಚು ಮಹತ್ವ ಪಡೆದಿರಲಿಲ್ಲ.
2015ರಲ್ಲಿ ಬೀಜಿಂಗ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ 16 ಅಥ್ಲೀಟ್ಗಳು ಭಾಗವಹಿಸಿದ್ದರು. ಈ ಪೈಕಿ ಇಂದರ್ಜೀತ್ ಸಿಂಗ್(ಪುರುಷರ ಶಾಟ್ಪುಟ್), ವಿಕಾಸ್ ಗೌಡ(ಪುರುಷರ ಡಿಸ್ಕಸ್ ಎಸೆತ) ಹಾಗೂ ಲಲಿತಾ ಬಾಬರ್(ಮಹಿಳೆಯರ ಹೆಪ್ಟಾಥ್ಲಾನ್)ಫೈನಲ್ ಸುತ್ತಿಗೆ ತಲುಪಿದ್ದರು. ಆದರೆ ಪದಕ ಗೆಲ್ಲಲು ವಿಫಲರಾಗಿದ್ದರು. ಈ ಬಾರಿಯ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 20 ಕಿ.ಮೀ. ರೇಸ್ವಾಕರ್ ಖುಶ್ಬೀರ್ ಕೌರ್, ರಿಲೇ ರನ್ನರ್ಗಳಾದ ಎಂ.ಆರ್. ಪೂವಮ್ಮ, ಜಿಸ್ನಾ ಮ್ಯಾಥ್ಯೂ ಹಾಗೂ ಅನು ರಾಘವನ್ ಹೊರತುಪಡಿಸಿ ಉಳಿದೆವರಲ್ಲರೂ ಹೊಸ ಮುಖವಾಗಿದ್ದಾರೆ. ಚಾಂಪಿಯನ್ಶಿಪ್ನ ಮೊದಲ ದಿನವಾದ ಶುಕ್ರವಾರ ಭಾರತದ ಯಾವ ಅಥ್ಲೀಟ್ಗಳು ಕಣಕ್ಕಿಳಿಯುತ್ತಿಲ್ಲ. ಏಷ್ಯನ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಗೋವಿಂದನ್ ಲಕ್ಷ್ಮಣನ್ 1000 ಮೀ. ಓಟದಲ್ಲ್ಲಿ ಚಿನ್ನ ಜಯಿಸಿದ್ದರೂ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿಲ್ಲ. ಭಾರತ ಆಗಸ್ಟ್ 5 ರಂದು ಹೆಪ್ಟಾಥ್ಲಾನ್ 100 ಮೀ. ಹರ್ಡಲ್ಸ್ನಲ್ಲಿ ಭಾಗವಹಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಹರ್ಡಲ್ಸ್ನಲ್ಲಿ ಸ್ವಪ್ನಾ ಬರ್ಮನ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆನಂತರ ಪುರುಷರ 400 ಮೀ. ಹೀಟ್ಸ್ನಲ್ಲಿ ಮುಹಮ್ಮದ್ ಅನಾಸ್ ಸ್ಪರ್ಧಿಸಲಿದ್ದಾರೆ.
ಐಎಎಎಫ್ ರ್ಯಾಂಕಿಂಗ್ನಲ್ಲಿ 14ನೆ ಸ್ಥಾನದಲ್ಲಿರುವ ಭಾರತದ ಯುವ ಆಟಗಾರ ನೀರಜ್ ಚೋಪ್ರಾ ಈ ವರ್ಷ 85.63 ಮೀ. ದೂರ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಕಳೆದ ವರ್ಷ 86.48 ಮೀ. ದೂರ ಜಾವೆಲಿನ್ ಎಸೆದಿದ್ದ ನೀರಜ್ ಜೂನಿಯರ್ ವಿಶ್ವ ದಾಖಲೆ ನಿರ್ಮಿಸಿದ್ದರು. ನೀರಜ್ ಪದಕಕ್ಕಾಗಿ ಸ್ಪರ್ಧಿಸಬೇಕಾದರೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.
ಐಎಎಎಫ್ ರ್ಯಾಂಕಿಂಗ್ನಲ್ಲಿ 2ನೆ ಸ್ಥಾನದಲ್ಲಿರುವ ಮಹಿಳೆಯರ 400 ಮೀ.ಓಟಗಾರ್ತಿ ನಿರ್ಮಲಾ ಶೆರೊನ್ ಈ ವರ್ಷ 51.28 ಸೆಕೆಂಡ್ನಲ್ಲಿ ಗುರಿ ತಲುಪಿದ್ದರು. ಆದರೆ, ಅವರು ಸೆಮಿಫೈನಲ್ ದಾಟಲು ವಿಫಲರಾಗಿದ್ದಾರೆ.
ಪುರುಷರ ಹರ್ಡಲ್ಸ್ನಲ್ಲಿ ಸ್ಪರ್ಧಿಸುತ್ತಿರುವ ಸಿದ್ಧ್ದಾರ್ಥ್ ತಿಂಗಳಾಯ ಭಾರೀ ಭರವಸೆ ಮೂಡಿಸುತ್ತಿದ್ದರೂ ಸ್ಥಿರ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. 13.48 ಸೆಕೆಂಡ್ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಸಿದ್ಧ್ದಾರ್ಥ್ ಈ ಮೂಲಕ ಲಂಡನ್ ಒಲಿಂಪಿಕ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 13.72 ಸೆಕೆಂಡ್ನಲ್ಲಿ ಗುರಿ ತಲುಪಿ 5ನೆ ಸ್ಥಾನ ಪಡೆದಿದ್ದಾರೆ.
ಜೂನ್ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ಫೆಡರೇಶನ್ ಕಪ್ನಲ್ಲಿ 61.86 ಮೀ. ದೂರಕ್ಕೆ ಜಾವೆಲಿನ್ ಎಸೆದು ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದ ಅನು ರಾಣಿ ಫೈನಲ್ ತಲುಪಲು ಎದುರು ನೋಡುತ್ತಿದ್ದಾರೆ.
ಅಂತಿಮ ಕ್ಷಣದಲ್ಲಿ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದ ಓಟಗಾರ್ತಿ ದ್ಯುತಿ ಚಂದ್, 20 ಕಿ.ಮೀ. ರೇಸ್ ವಾಕ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಕೆ.ಟಿ. ಇರ್ಫಾನ್, ದೇವೇಂದರ್ ಸಿಂಗ್ ಹಾಗೂ ಗಣಪತಿ ಕೃಷ್ಣನ್ ಹಾಗೂ ಖುಶ್ಬೀರ್ ಕೌರ್, ಪುರುಷ ಹಾಗೂ ಮಹಿಳಾ ಮ್ಯಾರಥಾನ್ ಓಟಗಾರರಾದ ಗೋಪಿ ಹಾಗೂ ಮೊನಿಕಾ ಅಥಾರೆ ಅಗ್ರ-15ರಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ.