ಏಷ್ಯಾಕಪ್: ಭಾರತದ ಅಂಡರ್-19 ತಂಡಕ್ಕೆ ಹಿಮಾಂಶು ರಾಣಾ ನಾಯಕ
ಹೊಸದಿಲ್ಲಿ, ಅ.16: ಪ್ರಥ್ವಿ ಶಾ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಮಲೇಷ್ಯಾದಲ್ಲಿ ಆರಂಭವಾಗಲಿರುವ ಅಂಡರ್-19 ಏಷ್ಯಾಕಪ್ಗೆ ಭಾರತವನ್ನು ಹಿಮಾಂಶು ರಾಣಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಭಾರತ ಆಗಸ್ಟ್ನಲ್ಲಿ ಇಂಗ್ಲೆಂಡ್ಗೆ ಸೀಮಿತ ಓವರ್ ಕ್ರಿಕೆಟ್ ಆಡಲು ತೆರಳಿದ್ದಾಗ ಶಾ ತಂಡದ ನಾಯಕನಾಗಿದ್ದರು.
ಇತ್ತೀಚೆಗೆ ದುಲೀಪ್ ಟ್ರೋಫಿ ಫೈನಲ್ನಲ್ಲಿ 17ರ ಹರೆಯದ ಶಾ ಶತಕ(154) ದಾಖಲಿಸಿದ್ದ ಹಿನ್ನೆಲೆಯಲ್ಲಿ ಆಯ್ಕೆಗಾರರು ಶಾ ಅವರು ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮುಂಬೈ ಹಾಗೂ ತಮಿಳುನಾಡು ನಡುವೆ ನಡೆದಿದ್ದ ರಣಜಿ ಟ್ರೋಫಿ ಫೈನಲ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಶಾ ಶತಕ ದಾಖಲಿಸಿದ್ದರು. ಕಳೆದ ತಿಂಗಳು ನಡೆದಿದ್ದ ದುಲೀಪ್ ಟ್ರೋಫಿ ಫೈನಲ್ನಲ್ಲೂ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದರು.
ಏಷ್ಯಾಕಪ್ ನ.9 ರಿಂದ 20ರ ತನಕ ಮಲೇಷ್ಯಾದಲ್ಲಿ ನಡೆಯಲಿದೆ. ಈ ಟೂರ್ನಿಯು ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ ಕಾರಣ ಮಲೇಷ್ಯಾಕ್ಕೆ ಪಂದ್ಯವನ್ನು ಸ್ಥಳಾಂತರಿಸಲಾಗಿತ್ತು.
ಅಂಡರ್-19 ಏಷ್ಯಾಕಪ್ಗೆ ಭಾರತ ತಂಡ
ಹಿಮಾಂಶು ರಾಣಾ(ನಾಯಕ), ಅಭಿಷೇಕ್ ಶರ್ಮ(ಉಪನಾಯಕ), ಅಥರ್ವ, ಮಂಜೋತ್ ಕಾರ್ಲ, ಸಲ್ಮಾನ್ ಖಾನ್, ಅನುಜ್ ರಾವತ್, ಹಾರ್ವಿಕ್ ದೇಸಾಯಿ, ರಿಯಾನ್ ಪರಾಗ್, ಅನುಕೂಲ್ ರಾಯ್, ಶಿವ ಸಿಂಗ್, ತನುಶ್ ಕೋಟ್ಯಾನ್, ದರ್ಶನ್ ನಲ್ಕಂಡೆ, ವಿವೇಕಾನಂದ ತಿವಾರಿ, ಆದಿತ್ಯ ಠಾಕ್ರೆ, ಮನ್ದೀಪ್ ಸಿಂಗ್.