ಹೈದರಾಬಾದ್ನಲ್ಲಿ ಲಘು ಭೂಕಂಪನ; ಜನರಲ್ಲಿ ಆತಂಕ
ಹೈದರಾಬಾದ್, ಅ.22: ಹೈದರಾಬಾದ್ನ ಬೊರಬಂದ ಪ್ರದೇಶದಲ್ಲಿ ಸತತ ಎರಡನೆಯ ದಿನ ಭೂಮಿ ಲಘುವಾಗಿ ಕಂಪಿಸಿದ ಘಟನೆ ನಡೆದಿದ್ದು, ಯಾವುದೇ ಸಾವು-ನೋವು ಅಥವಾ ನಷ್ಟ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗಿನ ಜಾವ ಮೊದಲ ಬಾರಿಗೆ ಭೂಮಿ ಲಘುವಾಗಿ ಕಂಪಿಸಿದ ಅನುಭವವಾಗಿದೆ. ಬಳಿಕ ದಿನವಿಡೀ ಆಗಿಂದಾಗ್ಗೆ ಭೂಮಿ ಕಂಪಿಸಿದೆ ಎಂದು ಬೊರಬಂದ ಪ್ರದೇಶದ ಇಂದಿರಾನಗರ, ಸಾಯಿಬಾಬಾ ನಗರ, ಅಂಬೇಡ್ಕರ್ ನಗರ, ಭವಾನಿಶಂಕರ ನಗರ ಹಾಗೂ ಹಬೀಬ್ ಫಾತಿಮಾ ನಗರ ಎರಡನೇ ಮತ್ತು ಮೂರನೇ ಹಂತದ ನಿವಾಸಿಗಳು ತಿಳಿಸಿದ್ದಾರೆ.
ಭೂಮಿ ಕಂಪಿಸಿದ ಸಂದರ್ಭ ಭೂಮಿಯೊಳಗಡೆ ಕೇಳಿಸಿದ ಸದ್ದಿನಿಂದ ಭೀತರಾದ ಹಲವರು ಭೂಕಂಪದ ಭಯದಿಂದ ಮನೆಯಿಂದ ಹೊರಗೆ ಓಡಿಬಂದರು. ಆದರೆ ಯಾವುದೇ ಕಟ್ಟಡ ಅಥವಾ ಮನೆಗಳಿಗೆ ಹಾನಿಯಾಗಿಲ್ಲ. ಭೂಮಿಯ ಕಂಪಿಸುವಿಕೆಯನ್ನು ದಾಖಲಿಸಿಕೊಳ್ಳಲು ‘ನ್ಯಾಷನಲ್ ಜಿಯೊಫಿಸಿಕಲ್ ಇನ್ಸ್ಟಿಟ್ಯೂಟ್’ (ಎನ್ಜಿಆರ್ಐ) ಈ ಪ್ರದೇಶದಲ್ಲಿ ಎರಡು ಕೇಂದ್ರಗಳನ್ನು ಶನಿವಾರ ರಾತ್ರಿ ಸ್ಥಾಪಿಸಿದ ಬಳಿಕ ನಾಲ್ಕು ಬಾರಿ ಲಘುಕಂಪನ ದಾಖಲಾಗಿದೆ.
ಭೂಮಿಯ ಅದುರುವಿಕೆಯಿಂದ ಸ್ಥಳದಲ್ಲಿ ಭಾರೀ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ತುರ್ತು ಸ್ಥಿತಿ ನಿಭಾಯಿಸಲು ತುರ್ತು ನೆರವು ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆದರೆ ಇದುವರೆಗೆ ಅಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಯೂಸುಫ್ಗಡದ ಜಿಲ್ಲಾಧಿಕಾರಿ ಎ.ರಮೇಶ್ ತಿಳಿಸಿದ್ದಾರೆ. ಇದು ಸಾಧಾರಣ ಕಂಪನವಾಗಿದ್ದು ಆತಂಕ ಪಡಬೇಕಿಲ್ಲ. ಈ ಪ್ರದೇಶದಲ್ಲಿ ಭೂಮಿಯೊಳಗಡೆ ಕೇಂದ್ರೀಕೃತಗೊಂಡಿರುವ ಗ್ರಾನೈಟ್ ಶಿಲೆಗಳಿಂದ ಉಂಟಾದ ಒತ್ತಡ ಇಲ್ಲಿ ಕೇಳಿಬರುವ ಭಾರೀ ಶಬ್ದಕ್ಕೆ ಕಾರಣವಾಗಿದೆ ಎಂದು ಎನ್ಜಿಆರ್ಐ ಮುಖ್ಯ ವಿಜ್ಞಾನಿ ಡಾ. ಶ್ರೀನಾಗೇಶ್ ದವಲೂರಿ ತಿಳಿಸಿದ್ದಾರೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ ಲಘುಭೂಕಂಪನದ ಅನುಭವವಾಗಿತ್ತು.
ಈ ಪ್ರದೇಶದಲ್ಲಿ ಈ ವರ್ಷ ಭಾರೀ ಮಳೆಯಾಗಿದ್ದು , ಮಳೆ ನೀರು ಭೂಮಿಯೊಳಗೆ ಇಂಗಿ ಕಲ್ಲಿನೆಡೆಗೆ ಸೇರಿಕೊಂಡು ಲಘು ಭೂಕಂಪನದ ಅನುಭವಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.