ಸೋಲುವ ಭೀತಿಯಿಂದ ಹಾರ್ದಿಕ್ ಪಟೇಲ್ ಆಪ್ತರ ಖರೀದಿಗೆ ಬಿಜೆಪಿ ಯತ್ನ: ಕಾಂಗ್ರೆಸ್
ಹೊಸದಿಲ್ಲಿ, ಅ.23: ‘‘ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಆಡಳಿತಾರೂಢ ಬಿಜೆಪಿ ಹಾರ್ದಿಕ್ ಪಟೇಲ್ ಆಪ್ತರನ್ನು ಖರೀದಿಸುವ ಯತ್ನ ನಡೆಸಿದೆ. ಕೋಟಿ ರೂ. ಆಮಿಷವೊಡ್ಡಿರುವ ಬಗ್ಗೆ ಹಾರ್ದಿಕ್ ಆಪ್ತರು ಆರೋಪಿಸಿದ್ದಾರೆ’’ ಎಂದು ಕಾಂಗ್ರೆಸ್ ವಕ್ತಾರ ಮನೋಜ್ ತಿವಾರಿ ಆರೋಪಿಸಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ರೀತಿ ವರ್ತಿಸುತ್ತಿದಾರೆ. ಗುಜರಾತ್ನಲ್ಲಿ ಬಿಜೆಪಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗಿದೆ. ಗುಜರಾತ್ನಲ್ಲಿ ಚುನಾವಣೆ ನೀತಿ ಸಂಹಿತೆ ಏಕೆ ಜಾರಿಯಾಗಿಲ್ಲ. ಅಲ್ಲಿ ಹೊಸ ಯೋಜನೆ ಜಾರಿಗೆ ಅವಕಾಶ ನೀಡಿದ್ದು ಏಕೆ ಎಂದು ಚುನಾವಣಾ ಆಯೋಗವೇ ಉತ್ತರಿಸಬೇಕಾಗಿದೆ’’ ಎಂದು ತಿವಾರಿ ಆಗ್ರಹಿಸಿದರು.
ಗುಜರಾತ್ನ ಪ್ರಬಲ ಪಟೇಲ್ ಸಮುದಾಯಕ್ಕೆ (ಪಾಟಿದಾರ್) ಮೀಸಲಾತಿ ಕಲ್ಪಿಸಬೇಕೆಂದು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಗುಜರಾತ್ನಲ್ಲಿ ಭಾರೀ ಹೋರಾಟ ನಡೆದಿದೆ. ಹಾರ್ದಿಕ್ ಪಟೇಲ್ ಇದೀಗ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ರ ಆಪ್ತರಾದ ವರುಣ್ ಹಾಗೂ ರೇಷ್ಮಾ ಪಟೇಲ್ರನ್ನು ಬಿಜೆಪಿ ತನ್ನತ್ತ ಸೆಳೆದಿದೆ.
ಈನಡುವೆ ರವಿವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಗುಜರಾತ್ನ ಪಾಟಿದಾರ್ನ ಹಿರಿಯ ಮುಖಂಡ ನರೇಂದ್ರ ಪಟೇಲ್‘‘ಬಿಜೆಪಿ ಪಕ್ಷ ಸೇರಲು ತನಗೆ 1 ಕೋ.ರೂ.ಕೊಡುಗೆಯ ಆಮಿಷ ನೀಡಲಾಗಿದೆ’’ ಎಂದು ಸಾಕ್ಷಿ ಸಮೇತ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ತನಗೆ ಮುಂಗಡವಾಗಿ ನೀಡಿರುವ 10 ಲಕ್ಷ ರೂ. ನಗದನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದರು.