ಬಿಜೆಪಿ ಗುಜರಾತ್ ಚುನಾವಣೆಯಿಂದ ದೂರ ಓಡುತ್ತಿದೆ: ಕಾಂಗ್ರೆಸ್
ಚು.ಆಯೋಗ ವೇಳಾಪಟ್ಟಿ ಪ್ರಕಟಿಸಲಿ
ಹೊಸದಿಲ್ಲಿ,ಅ.23: ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆಯನ್ನು ತಕ್ಷಣವೇ ಘೋಷಿಸುವಂತೆ ಮತ್ತು ಮಾದರಿ ಸಂಹಿತೆಯನ್ನು ಜಾರಿಗೊಳಿಸುವಂತೆ ಸೋಮವಾರ ಆಗ್ರಹಿಸಿರುವ ಕಾಂಗ್ರೆಸ್, ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯಿಂದ ದೂರ ಓಡುವ ಬಿಜೆಪಿಯ ಪ್ರಯತ್ನವನ್ನು ಬೆಂಬಲಿಸಬಾರದು ಎಂದು ಹೇಳಿದೆ.
ಪ್ರಧಾನಿಯಿಂದ ಯೋಜನೆಗಳ ಪ್ರಕಟಣೆಯ ಜೊತೆಗೆ ರಾಜ್ಯದ ಜನರನ್ನು ಓಲೈಸಲು ತನ್ನ ಕೊನೆಯ ಘಳಿಗೆಯವರೆಗಿನ ಪ್ರಯತ್ನಗಳಿಗಾಗಿ ಗುಜರಾತ್ ವಿಧಾನಸಭಾ ಚುನಾವಣೆಯನ್ನು ವಿಳಂಬಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದೂ ಅದು ಆರೋಪಿಸಿದೆ.
ಚುನಾವಣೆಯಿಂದ ದೂರ ಓಡುವ ಬಿಜೆಪಿಯ ಪ್ರಯತ್ನವನ್ನು ಚುನಾವಣಾ ಆಯೋಗವೇಕೆ ಅನಗತ್ಯವಾಗಿ ಬೆಂಬಲಿಸುತ್ತಿದೆ? ಚುನಾವಣಾ ಆಯೋಗವು ಸಾಂವಿಧಾ ನಿಕ ಹೊಣೆಗಾರಿಕೆ ಮತ್ತು ಆದೇಶವನ್ನು ಹೊಂದಿದೆ. ಅದು ಗುಜರಾತ್ನಲ್ಲಿ ಚುನಾವಣಾ ದಿನಾಂಕಗಳನ್ನು ತಕ್ಷಣವೇ ಘೋಷಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದರು.
ಚುನಾವಣಾ ಆಯೋಗ ಕುರಿತು ಕಾಂಗ್ರೆಸ್ ಹೇಳಿಕೆಗೆ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ವಕ್ತಾರ ಪಿ.ಚಿದಂಬರಂ ಅವರು, ಪ್ರಜೆಗಳು ಚುನಾವಣಾ ಆಯೋಗವನ್ನು ಪ್ರಶ್ನಿಸಬಾರದೆಂದಿದ್ದರೆ ಅವರೇನು ಮಾಡಬೇಕು, ಆಯೋಗವನ್ನು ಪ್ರಾರ್ಥಿಸುತ್ತಿರಬೇಕೇ ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಗುಜರಾತ್ನಲ್ಲಿ ತಾನು ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವದು ಬಿಜೆಪಿಗೆ ಗೊತ್ತಾಗಿದೆ. ಅದು ಹತಾಶಗೊಂಡಿದೆ, ಗುಜರಾತನ್ನು ಹೇಗಾದರೂ ಮಾಡಿ ಉಳಿಸಿ ಕೊಳ್ಳಲು ಹಣಬಲ ಮತ್ತು ತೋಳ್ಬಲದ ಬಳಕೆ ಸೇರಿದಂತೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಧಾನಿಯವರಂತೂ ರಾಷ್ಟ್ರ ರಾಜಧಾನಿಯನ್ನು ಗಾಂಧಿನಗರಕ್ಕೆ ಸ್ಥಳಾಂತರಿ ಸಿದ್ದಾರೆ ಎಂದು ತಿವಾರಿ ಹೇಳಿದರು.