ವಿಶಾಲ್ ಚಿತ್ರ ನಿರ್ಮಾಣ ಕಂಪೆನಿ ಮೇಲೆ ಜಿಎಸ್ಟಿ ಬೇಹುಗಾರಿಕೆ ಘಟಕದ ಅಧಿಕಾರಿಗಳಿಂದ ದಾಳಿ
ಚೆನ್ನೈ, ಆ. 21: ತಮಿಳು ನಟ ವಿಶಾಲ್ ಅವರ ಚೆನ್ನೈಯಲ್ಲಿ ರುವ ಚಿತ್ರ ನಿರ್ಮಾಣ ಕಂಪೆನಿ ವಿಶಾಲ್ ಫಿಲ್ಮ್ ಫ್ಯಾಕ್ಟರಿ ಮೇಲೆ ಜಿಎಸ್ಟಿಯ ಬೇಹುಗಾರಿಕಾ ಘಟಕ ಸೋಮವಾರ ದಾಳಿ ಮಾಡಿದೆ.
ಹಲವು ಲಕ್ಷ ರೂಪಾಯಿ ಸೇವಾ ತೆರಿಗೆ ಬಾಕಿ ಉಳಿಸಿದ ಮಾಹಿತಿ ಹಿನ್ನೆಲೆಯಲ್ಲಿ ಜಿಎಸ್ಟಿಯ ಬೇಹುಗಾರಿಕಾ ಘಟಕ ದಾಳಿ ಮಾಡಿದೆ.
ನಟ ವಿಜಯ್ ಚಿತ್ರ ‘ಮೆರ್ಸಲ್’ ಕುರಿತಂತೆ ಬಿಜೆಪಿ ನಾಯಕ ಎಚ್. ರಾಜಾ ಹಾಗೂ ವಿಶಾಲ್ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಈ ದಾಳಿ ನಡೆದಿದೆ. ನಾಲ್ವರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಜಿಎಸ್ಟಿ ಬೇಹುಗಾರಿಕಾ ಘಟಕ ಸೋಮವಾರ ಅಪರಾಹ್ನದಿಂದ ದಾಳಿ ಆರಂಭಿಸಿತು.
ನಿರ್ಮಾಣ ಸಂಸ್ಥೆಯ ವಡಪಲನಿ ಕಚೇರಿಯ ಆವರಣದಲ್ಲಿ ಅಪರಾಹ್ನ 2 ಗಂಟೆ ಬಳಿಕ ದಾಳಿ ಆರಂಭಿಸಲಾಯಿತು. “ಕಂಪೆನಿ ತೆರಿಗೆ ಪಾವತಿಸುತ್ತಿಲ್ಲ ಎಂಬುದು ನಮಗೆ ಈಗಷ್ಟೇ ತಿಳಿಯಿತು. ನಾವು ಕಳೆದ ಒಂದು ವರ್ಷಗಳಿಂದ ಮಾಹಿತಿ ಸಂಗ್ರಹಿಸಿತ್ತಿದ್ದು, ಈಗಷ್ಟೇ ದಾಳಿ ನಡೆಸಿದ್ದೇವೆ” ಎಂದು ಜಿಎಸ್ಟಿಯ ಹಿರಿಯ ಬೇಹುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
2013ರಲ್ಲಿ ವಿಶಾಲ್ ಫಿಲ್ಮ್ ಫ್ಯಾಕ್ಟರಿ ಆರಂಭಿಸಲಾಯಿತು. ‘ಕಥಕ್ಕಳಿ’, ‘ನಾನ್ ಸಿಗಪ್ಪು ಮನಿದನ್’ ಹಾಗೂ ‘ಆಂಬಳ’ ಸೇರಿದಂತೆ 6 ಚಿತ್ರಗಳನ್ನು ಸಂಸ್ಥೆ ನಿರ್ಮಿಸಿದೆ. ಈ ಎಲ್ಲ ಚಿತ್ರಗಳಲ್ಲಿ ವಿಶಾಲ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿಶಾಲ್ ತಮಿಳು ಚಿತ್ರ ನಿರ್ಮಾಣಕಾರರ ಮಂಡಳಿ ಅಧ್ಯಕ್ಷ ಹಾಗೂ ನಡಿಗರ್ ಸಂಗಮ್ನ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದಾರೆ.