ಬಿಜೆಪಿ ನವೆಂಬರ್ 8ರಂದು ಕಾಳಧನ ವಿರೋಧಿ ದಿನ ಆಚರಿಸಲಿದೆ : ಜೇಟ್ಲಿ
ಹೊಸದಿಲ್ಲಿ,ಅ.25 : ಸಾರ್ವಜನಿಕ ರಂಗದ ಬ್ಯಾಂಕುಗಳ ಮರುಬಂಡವಳೀಕರಣಕ್ಕೆ ರೂ. 2.11 ಲಕ್ಷ ಕೋಟಿ ಒದಗಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ಘೋಷಿಸಿದ್ದರೆ, ಇಂದು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ ಸಚಿವರು ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ಜಾರಿಗೊಳಿಸಿ ಒಂದು ವರ್ಷ ಸಂದ ದ್ಯೋತಕವಾಗಿ ಬಿಜೆಪಿ ನವೆಂಬರ್ 8ರಂದು ಬಿಜೆಪಿ 'ಕಾಳಧನ ವಿರೋಧಿ ದಿನ' ಆಚರಿಸಲಿದೆ ಎಂದರು. ಆದರೆ ವಿಪಕ್ಷ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡಿವೆ.
ಬ್ಯಾಂಕುಗಳ ಮರುಬಂಡವಳೀಕರಣ ಕ್ರಮವನ್ನು `ಸಿಗ್ನಿಫಿಕೆಂಟ್ ಕ್ರೆಡಿಟ್ ಪಾಸಿಟಿವ್" ಎಂದು ಜೇಟ್ಲಿ ಬಣ್ಣಿಸಿದ್ದಾರೆ. ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ವಿತ್ತ ಸಚಿವರು ಜನರಿಂದ ಹಣ ಸೆಳೆಯುವ ಉದ್ದೇಶ ಅದಕ್ಕಿರದೆ ಚಲಾವಣೆಯಲ್ಲಿರುವ ನಗದು ಹಣವನ್ನು ಕಡಿಮೆಗೊಳಿಸುವುದೇ ಅದರ ಉದ್ದೇಶವಾಗಿತ್ತು ಎಂದರು. ಕಾಳಧನದ ವಿರುದ್ಧ ಹೋರಾಟವನ್ನೇ ಕೈಗೊಳ್ಳದವರು ಮಾತ್ರ ಆರ್ಥಿಕ ಅವ್ಯವಹಾರಗಳನ್ನು ನಡೆಸುವುದರಲ್ಲಿ ಸಂತಸ ಕಾಣುತ್ತಾರೆ ಎಂದು ಅವರು ಆರೋಪಿಸಿದರು.
ದೇಶವನ್ನು ಹಲವಾರು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷಕ್ಕೆ ಕಾಳಧನದ ವಿರುದ್ಧ ಹೋರಾಟಲು ಸಾಕಷ್ಟು ಅವಕಾಶವಿದ್ದರೂ ಅವರು ಕಾಳಧನದ ವಿರುದ್ಧ ಕೈಗೊಂಡ ಒಂದೇ ಒಂದು ಕ್ರಮ ನೆನಪಿಗೆ ಬರುತ್ತಿಲ್ಲ ಎಂದೂ ಜೇಟ್ಲಿ ಹೇಳಿದರು.
ದೇಶವನ್ನು ನಾಶಗೈದವರು ಈಗ ಉಪದೇಶ ನೀಡುತ್ತಿದ್ದಾರೆಂದು ಅಮಾನ್ಯೀಕರಣ ನೀತಿಯನ್ನು ಕಟುವಾಗಿ ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜೇಟ್ಲಿ ತಿರುಗೇಟು ನೀಡಿದ್ದಾರೆ.