125 ಕೋಟಿ ಭಾರತೀಯರು ನಿರ್ಣಾಯಕ ಯುದ್ಧ ಗೆದ್ದಿದ್ದಾರೆ: ಪ್ರಧಾನಿ ಮೋದಿ
ನೋಟ್ ಬ್ಯಾನ್ ಗೆ ವರ್ಷ
ಹೊಸದಿಲ್ಲಿ,ನ.8 : ನೋಟು ಅಮಾನ್ಯೀಕರಣ ಕ್ರಮ ಕೈಗೊಂಡು ಒಂದು ವರ್ಷ ಇಂದು ತುಂಬುತ್ತಲೇ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ಏಳು ನಿಮಿಷ ಅವಧಿಯ ವೀಡಿಯೋವೊಂದನ್ನು ಟ್ವೀಟ್ ಮಾಡಿ ಅಮಾನ್ಯೀಕರಣದ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರಲ್ಲದೆ ``125 ಕೋಟಿ ಭಾರತೀಯರು ನಿರ್ಣಾಯುಕ ಯುದ್ಧ ನಡೆಸಿ ಗೆದ್ದಿದ್ದಾರೆ,'' ಎಂದು ಹೇಳಿದ್ದಾರೆ. ನೋಟು ಅಮಾನ್ಯೀಕರಣದ ಪ್ರಥಮ ವಾರ್ಷಿಕೋತ್ಸವವನ್ನು ಸರಕಾರ ಕಾಳಧನ ವಿರೋಧಿ ದಿನವನ್ನಾಗಿ ಆಚರಿಸುತ್ತಿದ್ದರೆ ವಿಪಕ್ಷಗಳು ಕರಾಳ ದಿನವನ್ನಾಗಿ ಆಚರಿಸುತ್ತಿದೆ.
►ಪ್ರಧಾನಿ ಮೋದಿ ಸಮೀಕ್ಷೆಯೊಂದನ್ನೂ ಆರಂಭಿಸಿದ್ದು ಭ್ರಷ್ಟಾಚಾರ ಮತ್ತು ಕಾಳಧನವನ್ನು ನಿರ್ಮೂಲನೆಗೈಯ್ಯಲು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೇನು ಅನಿಸುತ್ತಿದೆ ಎಂದು ತಿಳಿಯ ಬಯಸಿದ್ದಾರೆ. ಇನ್ನೊಂದು ಟ್ವೀಟಿನಲ್ಲಿ ``ಸರಕಾರ ಕಾಳಧನ ಮತ್ತು ಭ್ರಷ್ಟಾಚಾರ ವಿರುದ್ಧ ಕೈಗೊಂಡ ಹಲವಾರು ಕ್ರಮಗಳನ್ನು ಬೆಂಬಲಿಸಿದ್ದಕ್ಕಾಗಿ ಜನರಿಗೆ ನಮಿಸುತ್ತೇನೆ,'' ಎಂದಿದ್ದಾರೆ.
► ಅತ್ತ ಇಂದು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ``ನೋಟು ಅಮಾನ್ಯೀಕರಣ ಒಂದು ದುರಂತ. ಪ್ರಧಾನಿಯ ವಿವೇಚನಾರಹಿತ ಕ್ರಮದಿಂದ ನೊಂದ ಮಿಲಿಯಗಟ್ಟಲೆ ಜನರಿಗಾಗಿ ನಾವಿದ್ದೇವೆ,'' ಎಂದಿದ್ದಾರೆ.
► ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟ್ವೀಟ್ ಮಾಡಿ ``ಕಾಳಧನ ನಿರ್ಮೂಲನೆ ಮಾಡಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಗುಜರಾತ್ ಚುನಾವಣಾ ಪ್ರಚಾರ ಆರಂಭವಾಗಲಿ. ನಿರ್ಮೂಲನೆಗೈದ ಕಾಳಧನವನ್ನು ನೀವು ಕಾಣುತ್ತೀರಿ,'' ಎಂದಿದ್ದಾರೆ.
► ಮಂಗಳವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಮಾನ್ಯೀಕರಣವನ್ನು ಟೀಕಿಸಿ ``ಅದೊಂದು ಸಂಘಟಿತ ಲೂಟಿ'' ಎಂದು ಬಣ್ಣಿಸಿದ್ದರು.
► ಸಿಂಗ್ ಹೇಳಿಕೆಗೆ ಆಕ್ಷೇಪ ಸೂಚಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅಮಾನ್ಯೀಕರಣ ನೈತಿಕವಾಗಿ ಸರಿಯಾದ ಕ್ರಮ ಎಂದಿದ್ದರು.
► ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮಾನ್ಯೀಕರಣವನ್ನು ಒಂದು `ದುಷ್ಟ ಕೃತ್ಯ' ಎಂದು ಬಣ್ಣಿಸಿದ್ದರು.
► ಹಿರಿಯ ಬಿಜೆಪಿ ನಾಯಕರೂ, ಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ ದೇಶದಾದ್ಯಂತ ಸಂಚರಿಸಿ ಅಮಾನ್ಯೀಕರಣದ ಪ್ರಯೋಜನಗಳನ್ನು ಜನರಿಗೆ ವಿವರಿಸಲಿದ್ದಾರೆ.