ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ಟಿಎಂಸಿ ಶಾಸಕನ ಅರ್ಜಿ ವಜಾ
ಹೊಸದಿಲ್ಲಿ, ನ.10: ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯನ್ನು ಪ್ರಶ್ನಿಸಿ ಹಾಕಿದ್ದ ತೃಣಮೂಲ ಕಾಂಗ್ರೆಸ್ ಶಾಸಕನ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಆಧಾರ್ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ದೂರುಗಳು ಬಾಕಿಯಿರುವಾಗ ಮತ್ತೆ ಅಂತದ್ದೇ ದೂರನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆಧಾರ್ ವಿಚಾರದಲ್ಲಿ ಈಗಾಗಲೇ ಸಾವಿರಾರು ಅರ್ಜಿಗಳು ಬಂದಿವೆ. ಹಲವು ಅರ್ಜಿಗಳಲ್ಲಿ ಈ ವಿಷಯವನ್ನೂ ಪ್ರಸ್ತಾಪಿಸಲಾಗಿದೆ. ಹಾಗಾಗಿ ನೀವು ಸಂವಿಧಾನ ಪೀಠದ ಮುಂದೆ ಈ ದೂರುಗಳಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳುವಂತೆ ಅರ್ಜಿ ಹಾಕಲು ನಾವು ಅನುಮತಿ ನೀಡುತ್ತೇವೆ ಎಂದು ನ್ಯಾಯಾಲಯ ಟಿಎಂಸಿ ಶಾಸಕ ಮಹುವಾ ಮೊತ್ರಗೆ ತಿಳಿಸಿದೆ.
ಆಧಾರ್ಗೆ ಸಂಬಂಧಿಸಿದ 27 ದೂರುಗಳು ಈಗಾಗಲೇ ಪರಿಗಣನೆಗೆ ಬಾಕಿಯುಳಿದಿವೆ ಎಂದು ಆಧಾರ್ ಪರ ವಕೀಲರಾದ ರೊಹೆಬ್ ಹುಸೇನ್ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ತಮ್ಮ ಅರ್ಜಿಯನ್ನು ಪರಿಗಣಿಸುವಂತೆ ಮೊತ್ರ ಪರ ವಕೀಲರು ಮನವಿ ಮಾಡಿದಾಗ, ಆಧಾರ್ಗೆ ಸಂಬಂಧಿಸಿದಂತೆ ಅದರ ಪ್ರತಿಯೊಂದು ಆಯಾಮವನ್ನೂ ಈಗಾಗಲೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಎಂದು ಜಸ್ಟಿಸ್ ಸಿಕ್ರಿ ಸ್ಪಷ್ಟಪಡಿಸಿದರು.