ಬಿಹಾರ ಡಿಸಿಎಂ ಪುತ್ರನ ವಿವಾಹ ವೇದಿಕೆ ಸ್ಥಳಾಂತರ
ಲಾಲೂ ಪುತ್ರನ ಬೆದರಿಕೆ
ಪಾಟ್ನಾ, ನ. 26: ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪುತ್ರನ ವಿವಾಹಕ್ಕೆ ಅಡ್ಡಿಪಡಿಸುವುದಾಗಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ಪ್ರತಾಪ್ ಯಾದವ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ದಿಢೀರನೆ ವಿವಾಹ ಸ್ಥಳವನ್ನು ಬದಲಿಸಲಾಗಿದೆ.
"ಸುಶೀಲ್ ಮೋದಿ ಅವರ ಪುತ್ರ ಉತ್ಕರ್ಷ್- ಯಾಮಿನಿ ವಿವಾಹ ಸ್ಥಳವನ್ನು ರಾಜೇಂದ್ರ ನಗರದ ಶಖ ಮೈದಾನದಿಂದ ವಿಮಾನ ನಿಲ್ದಾಣ ಬಳಿಯ ಪಶುವೈದ್ಯ ಕಾಲೇಜು ಮೈದಾನಕ್ಕೆ ಬದಲಿಸಲಾಗಿದೆ" ಎಂದು ಡಿಸಿಎಂ ಕಚೇರಿ ಪ್ರಕಟಿಸಿದೆ.
"ಕೆಲ ಮುಖಂಡರು ಆಕ್ಷೇಪಾರ್ಹ ಹೇಳಿಕೆ ನೀಡಿ, ವಿವಾಹಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲ ಆಹ್ವಾನಿತರು ಬದಲಾವಣೆಯನ್ನು ಗಮನಿಸಬೇಕು" ಎಂದು ಪ್ರಕಟಣೆ ಹೇಳಿದೆ.
ಔರಂಗಾಬಾದ್ ಜಿಲ್ಲೆಯಲ್ಲಿ ಮಾಡಿದ ಭಾಷಣದ ವೇಳೆ ತೇಜ್ಪ್ರತಾಪ್ ಯಾದವ್ ಅವರು, "ಸುಶೀಲ್ ಮೋದಿ ಪುತ್ರನ ವಿವಾಹಕ್ಕೆ ನನ್ನನ್ನೂ ಆಹ್ವಾನಿಸಲಾಗಿದೆ. ನಾನು ಹೋದರೆ ಅಲ್ಲೇ ಸಾರ್ವಜನಿಕವಾಗಿ ಅವರ ಹಗರಣ ಬಯಲಿಗೆಳೆಯುತ್ತೇನೆ" ಎಂದು ಹೇಳಿದ್ದನ್ನು ಟಿವಿ ಚಾನಲ್ಗಳು ಪ್ರಸಾರ ಮಾಡಿದ್ದವು. "ಅವರ ಮನೆಯಲ್ಲೇ ಅವರನ್ನು ಥಳಿಸುತ್ತೇನೆ. ವಿವಾಹ ಸ್ಥಳದಲ್ಲೇ ಸಾರ್ವಜನಿಕ ಸಭೆ ನಡೆಸಿ, ಅಲ್ಲೋಲ ಕಲ್ಲೋಲ ಮಾಡುತ್ತೇನೆ" ಎಂದು ವೀಡಿಯೊ ತುಣುಕಿನಲ್ಲಿ ಹೇಳಲಾಗಿದೆ.