8 ಕತ್ತೆಗಳಿಗೆ ನಾಲ್ಕು ದಿನಗಳ ಕಾಲ ಜೈಲುಶಿಕ್ಷೆ!
ಅಷ್ಟಕ್ಕೂ ಅವುಗಳು ಮಾಡಿದ ಅಪರಾಧವೇನು ಗೊತ್ತೇ?
ಲಕ್ನೋ, ನ.27: ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಉರೈ ಜೈಲಿನಿಂದ ಸೋಮವಾರ ‘ವಿಶೇಷ ಕೈದಿಗಳು’ ಬಿಡುಗಡೆಯಾದರು. ಜೈಲು ಕಾಂಪೌಂಡಿನ ಹೊರಭಾಗದಲ್ಲಿದ್ದ ಬೆಲೆಬಾಳುವ ಗಿಡಗಳನ್ನು ತಿಂದದ್ದೇ ಅವರು ಮಾಡಿದ ತಪ್ಪಾಗಿತ್ತು!.
ಹೌದು.. ವಿಚಿತ್ರವೆನಿಸಿದರೂ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೆಲೆಬಾಳುವ ಗಿಡಗಳನ್ನು ತಿಂದದ್ದಕ್ಕಾಗಿ ಕತ್ತೆಗಳಿಗೆ ಸುಮಾರು 4 ದಿನಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, ಸೋಮವಾರ ಬಿಡುಗಡೆಗೊಳಿಸಲಾಗಿದೆ. ಕತ್ತೆಗಳ ಗಿಡಗಳನ್ನು ತಿಂದದ್ದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
“ಜೈಲಿನೊಳಗೆ ನೆಡುವುದಕ್ಕಾಗಿ ನಮ್ಮ ಹಿರಿಯ ಅಧಿಕಾರಿ ತರಿಸಿದ್ದ ಲಕ್ಷಾಂತರ ರೂ. ಬೆಲೆಬಾಳುವ ಗಿಡಗಳನ್ನು ಈ ಕತ್ತೆಗಳು ತಿಂದು ಹಾಕಿದೆ. ಎಚ್ಚರಿಕೆ ನೀಡಿದ್ದರೂ ಕತ್ತೆಗಳ ಮಾಲಕ ಅವುಗಳನ್ನು ಸರಿಯಾಗಿ ಕಟ್ಟಿ ಹಾಕಿರಲಿಲ್ಲ. ಅದಕ್ಕಾಗಿ ನಾವು ಕತ್ತೆಗಳನ್ನು ವಶಕ್ಕೆ ಪಡೆದುಕೊಂಡೆವು” ಎಂದು ಹೆಡ್ ಕಾನ್ ಸ್ಟೇಬಲ್ ಆರ್.ಕೆ ಮಿಶ್ರಾ ಎಂಬವರು ಹೇಳಿದ್ದಾರೆ.
“ನನ್ನ ಕತ್ತೆಗಳನ್ನು ಬಿಡಿಸಿಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಬಂದೆ. 8 ಕತ್ತೆಗಳನ್ನು ನಾಲ್ಕು ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು” ಎಂದು ಕತ್ತೆಗಳ ಮಾಲಕ ಕಮಲೇಶ್ ಹೇಳಿದ್ದಾರೆ.