ಗುಜರಾತ್ ಚುನಾವಣೆ: ಪ್ರಣಾಳಿಕೆ ಬಿಡುಗಡೆಗೊಳಿಸಿದ ಕಾಂಗ್ರೆಸ್
ನಿರುದ್ಯೋಗಿ ಯುವಕರಿಗೆ ಭತ್ತೆ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯ ಭರವಸೆ
ಅಹ್ಮದಾಬಾದ್, ಡಿ.4: ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ನಿರುದ್ಯೋಗಿ ಯುವಜನತೆಗೆ ಭತ್ತೆ, ಉದ್ಯೋಗ ಹಾಗು ಶಿಕ್ಷಣದಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಹಾಗು ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಸೇರಿದಂತೆ ಮೊದಲಾದ ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ದ ಪ್ರತಿಯೊಬ್ಬ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 4 ಸಾವಿರ ರೂ. ನಿರುದ್ಯೋಗ ಭತ್ತೆ, ವಿಶೇಷ ವರ್ಗದಡಿ ಪಾಟಿದಾರ್ ಸಮುದಾಯಕ್ಕೆ ಉದ್ಯೋಗ ಹಾಗು ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುವುದು ಎಂದಿದೆ.
ಬಿಜೆಪಿ ಬೆಂಬಲಿಗರಾದ ಪಾಟಿದಾರ್ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಸತತ ಪ್ರಯತ್ನಗಳನ್ನು ನಡೆಸುತ್ತಿದೆ. ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯಲ್ಲಿ 10 ರೂ. ಕಡಿತಗೊಳಿಸಲಾಗುವುದು ಎಂದೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಸಬ್ಸಿಡಿ ಸಹಿತ ಆರೋಗ್ಯ ಸೇವೆಗಾಗಿ ‘ಸರ್ದಾರ್ ಪಟೇಲ್ ಯುನಿವರ್ಸಲ್ ಹೆಲ್ತ್ ಕಾರ್ಡ್’, ಮುಖ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ದಿನವೊಂದಕ್ಕೆ 16 ಗಂಟೆ ವಿದ್ಯುತ್ . ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ, ಫಾಸ್ಟ್ ಟ್ರ್ಯಾಕ್ ಕೋರ್ಟ್ ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ.