ಕರ್ನಾಟಕ ಸೇರಿ 11 ರಾಜ್ಯಗಳಿಗೆ ತಲಾ 2 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ
ಹೊಸದಿಲ್ಲಿ, ಡಿ.7: ವಿಧವೆಯರಿಗೆ ಆಶ್ರಯ ಮತ್ತು ಪುನರ್ವಸತಿ ನೀಡುವ ನೆರವು ಯೋಜನೆಯಡಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಬೇಕೆಂಬ ಆದೇಶವನ್ನು ಪಾಲಿಸದ 11 ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸುಪ್ರೀಂಕೋರ್ಟ್ ತಲಾ 2 ಲಕ್ಷ ರೂ. ದಂಡ ವಿಧಿಸಿದೆ.
ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಮಿಜೋರಂ, ಅಸ್ಸಾಂ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು ಮತ್ತು ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್ ಹವೇಲಿಗೆ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ.
ಅಪೂರ್ಣ ಮಾಹಿತಿ ನೀಡಿದ ರಾಜ್ಯಗಳಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ದಂಡದ ಹಣವನ್ನು ಸುಪ್ರೀಂಕೋರ್ಟ್ನಲ್ಲಿ ನಾಲ್ಕು ವಾರದೊಳಗೆ ಠೇವಣಿ ಇಡುವಂತೆ ನ್ಯಾಯಪೀಠದ ಆದೇಶದಲ್ಲಿ ತಿಳಿಸಲಾಗಿದೆ.
18 ವರ್ಷದ ಕೆಳಹರೆಯದ ಬಾಲಕಿಯರು ಪತಿಯ ಮರಣಾನಂತರ ಮರು ಮದುವೆಯಾಗಲು ಇರುವ ವ್ಯವಸ್ಥೆಯ ಬಗ್ಗೆ ಎನ್ಜಿಒ ಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.