ಶಮ್ನಾಡ್ ಬಶೀರ್ಗೆ ಪಿರಪ್ಪನ್ಕೋಡ್ ಶ್ರೀಧರನ್ ಸ್ಮಾರಕ ಪ್ರಶಸ್ತಿ
ತಿರುವನಂತಪುರಂ,ಡಿ.11: ಸಾಮಾಜಿಕ ಬದ್ಧತೆಯುಳ್ಳ ಅಸಾಧಾರಣ ನ್ಯಾಯವಾದಿಗಳಿಗೆ ನೀಡಲಾಗುವ ಪ್ರತಿಷ್ಠಿತ ಪಿರಪ್ಪನ್ಕೋಡ್ ಶ್ರೀಧರನ್ ಸ್ಮಾರಕ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಕಾನೂನಿನಲ್ಲಿ ಭಾರತೀಯ ಹಿತಾಸಕ್ತಿಗಳ ರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆಯಾದ ‘ಸ್ಪೈಸಿಐಪಿ’ಯ ಸ್ಥಾಪಕ ಪ್ರೊ.ಡಾ. ಶಮ್ನಾಡ್ ಬಶೀರ್ ಅವರಿಗೆ ಘೋಷಿಸಲಾಗಿದೆ.
ಶಿಕ್ಷಣದಲ್ಲಿ ಅಸಮಾನತೆಯ ನಿವಾರಣೆಗಾಗಿನ ಹೋರಾಟದ ಹರಿಕಾರರೆನಿಸಿರುವ ಬಶೀರ್, ಕಾನೂನು ಶಿಕ್ಷಣದ ಲಭ್ಯತೆಯ ಅವಕಾಶದ ವೃದ್ಧಿಗಾಗಿ ಶ್ರಮಿಸುವ ಐಡಿಐಎ ಸಂಸ್ಥೆಯ ಆಡಳಿತ ಟ್ರಸ್ಟಿಯೂ ಆಗಿದ್ದಾರೆ. ಐಡಿಐಎ ಸ್ಥಾಪನೆಯಾದಾಗಿನಿಂದ ಅದು ಹಲವಾರು ದುರ್ಬಲ ಹಾಗೂ ಪ್ರಾತಿನಿಧ್ಯವಂಚಿತ ಗುಂಪುಗಳಿಗೆ ಕಾನೂನು ಶಿಕ್ಷಣದ ಅವಕಾಶವನ್ನು ಒದಗಿಸಲು ಶ್ರಮಿಸುತ್ತಿದೆ.
ಮುಂದಿನ ವರ್ಷದ ಜನವರಿ 6ರಂದು ತಿರುವನಂತಪುರದ ಬಾರ್ ಅಸೋಸಿಯೇಶನ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಶಮ್ನಾಡ್ ಬಶೀರ್ ಅವರಿಗೆ ಪಿರಪ್ಪನ್ಕೋಡ್ ಶ್ರೀಧರನ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆ್ಯಂಟನಿ ಡೊಮಿನಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕೋಪಯೋಗಿ ಸಚಿವ ವಿ.ಜೆ.ಸುಧಾಕರನ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಅರಣ್ಯ ಸಚಿವ ಎಂ. ರಾಜು ಮುಖ್ಯ ಅತಿಥಿಯಾಗಿರುವರು.ಕೇರಳ ನ್ಯಾಯವಾದಿಗಳ ಸಂಘವು ತನ್ನ ಸ್ಥಾಪಕಾಧ್ಯಕ್ಷರಾದ ಪಿರಪ್ಪನ್ ಕೋಡ್ ಶ್ರೀಧರನ್ ನಾಯರ್ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ನೀಡುತ್ತಿದೆ ಶಮ್ನಾಡ್ ಬಶೀರ್ 2014ರಲ್ಲಿ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರಾಗಿದ್ದರು.