ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲು
ಹಿಂದೂ ಸಮಾಜೋತ್ಸವದಲ್ಲಿ ಕತ್ತಿ ಝಳಪಿಸಿ ಪ್ರಚೋದನಕಾರಿ ಭಾಷಣ
ಹೈದರಾಬಾದ್, ಡಿ.17: ಕೋಮು ಸಾಮರಸ್ಯವನ್ನು ಹದಗೆಡಿಸುವ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಯಾದಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾದಗಿರಿಯಲ್ಲಿ ಗುರುವಾರ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ್ದ ಹೈದರಾಬಾದ್ ನ ಗೋಶಮಹಲ್ ಶಾಸಕ ರಾಜಾ ಸಿಂಗ್ ಕತ್ತಿ ಝಳಪಿಸಿದ್ದಲ್ಲದೆ, ದೇಶದಲ್ಲಿರುವ ಎಲ್ಲಾ ಹಿಂದೂಗಳು ಆಯುಧಗಳನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ರಾಜಾ ಸಿಂಗ್ ಮಾತ್ರವಲ್ಲದೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್, ವಿಜಯ್ ಪಾಟೀಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಪ್ರಮೋದ್ ಮುತಾಲಿಕ್, ವಿಜಯ್ ಪಾಟೀಲ್, ರಾಜಾ ಸಿಂಗ್ ಪಾಟೀಲ್ ಹಾಗು ಆಂದೋಲ ಸ್ವಾಮಿ ವಿರುದ್ಧ ಮಾರಕಾಯುಧಗಳ ಪ್ರದರ್ಶನ ಹಾಗು ಸಮುದಾಯಗಳ ನಡುವೆ ದ್ವೇಷ ಹರಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಐಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ಚಿತ್ರಮಂದಿಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದ ರಾಜಾ ಸಿಂಗ್ ವಿವಾದ ಸೃಷ್ಟಿಸಿದ್ದರು.