ಬಿಜೆಪಿಯಿಂದ ಸಂವಿಧಾನದ ಮೇಲೆ ದಾಳಿ: ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ. 28: ಸಂವಿಧಾನ ಹಾಗೂ ಎಲ್ಲ ಭಾರತೀಯರ ಹಕ್ಕುಗಳನ್ನು ರಕ್ಷಿಸುವುದು ತನ್ನ ಪಕ್ಷ ಹಾಗೂ ಪ್ರಜೆಗಳ ಕರ್ತವ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ನ 133ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಹಾಗೂ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುವ ಸಂವಿಧಾನದ ಕರಡು ರಚನೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಸಂವಿಧಾನ ಇಂದು ಆಡಳಿತಾರೂಢ ಬಿಜೆಪಿಯಿಂದ ದಾಳಿಗೊಳಗಾಗುತ್ತಿದೆ ಎಂದರು.
ಬಿಜೆಪಿಯ ಹಿರಿಯ ಸದಸ್ಯರು ಸಂವಿಧಾನದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಹಿಂದಿನಿಂದ ರಹಸ್ಯವಾಗಿ ದಾಳಿ ಮಾಡುತ್ತಿರುವುದು ನೋಡಿದರೆ ದುಃಖವಾಗುತ್ತದೆ ಎಂದು ರಾಹುಲ್ ಗಾಂಧಿ ಇಲ್ಲಿ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಸಂವಿಧಾನವನ್ನು ಹಾಗೂ ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಹಾಗೂ ಕಾಂಗ್ರೆಸ್ ಪಕ್ಷದ ಕರ್ತವ್ಯ ಎಂದು ಅವರು ಹೇಳಿದರು.
ಕಾಂಗ್ರೆಸ್ನ ಸತ್ಯವೇ ಸದ್ಗುಣವೆಂಬ ಕೇಂದ್ರ ಚಿಂತನೆ ಬಗ್ಗೆ ಒತ್ತಿ ಹೇಳಿದ ರಾಹುಲ್ ಗಾಂಧಿ, ಪಕ್ಷ ‘ಸತ್ಯವನ್ನು ಸ್ವೀಕರಿಸುತ್ತದೆ, ಸತ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ’ ಎಂದರು.