ಸಂವಿಧಾನದ ಪರಮಾಧಿಕಾರಕ್ಕೆ ತಲೆಬಾಗಬೇಕು: ಸಿಜೆಐ ದೀಪಕ್ ಮಿಶ್ರಾ
ಪಣಜಿ, ಡಿ. 29: ಆಡಳಿತದ ಮೂರು ವಿಭಾಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಸಂವಿಧಾನದ ಪರಮಾಧಿಕಾರಕ್ಕೆ ತಲೆಬಾಗಬೇಕು. ಇಲ್ಲದೇ ಇದ್ದರೆ ದೇಶ ಅರಾಜಕತೆಗೆ ದೂಡಲ್ಪಡುತ್ತದೆ ಎಂದು ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿರ್ಶಾ ಹೇಳಿದ್ದಾರೆ.
ಇಲ್ಲಿನ ಅಖಿಲ ಒಡಿಶಾ ವಕೀಲರ ಎರಡು ದಿನಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದಲ್ಲಿ ಬರೆಯಲಾದ ಕಾನೂನಿನ ನಿಯಮಗಳನ್ನು ದೇಶದ ಜನರು ಅನುಸರಿಸಬೇಕು ಎಂದು ಅವರು ಹೇಳಿದರು.
ಮಹಾಭಾರತದ ಕಥೆ ಉಲ್ಲೇಖಿಸಿದ ಅವರು, “ಯುದ್ಧದಲ್ಲಿ ಜಯಗಳಿಸಲು ದುರ್ಯೋಧನ ತಾಯಿ ಗಾಂಧಾರಿಯಿಂದ ಆಶೀರ್ವಾದ ಕೋರಿದ. ಆಗ ಗಾಂಧಾರಿ, ಎಲ್ಲಿ ಧರ್ಮ ಇದೆಯೋ, ಅಲ್ಲಿ ಜಯ ಇದೆ ಎಂದು ಆಶೀರ್ವದಿಸಿದರು”. ಇಲ್ಲಿ ಧರ್ಮದ ಬಗ್ಗೆ ಹೇಳಲು ಕಾರಣ ಕಾನೂನಿನ ನಿಯಮಗಳನ್ನು ಅನುಸರಿಸಲು ಎಂದು ಅವರು ಹೇಳಿದರು.
ಸಂವಿಧಾನದ ಸಾರ್ವಭೌಮತೆಯ ಪರಮಾಧಿಕಾರವನ್ನು ಒತ್ತಿ ಹೇಳಿದ ಮಿಶ್ರಾ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ- ಎಲ್ಲವೂ ಸಂವಿಧಾನದ ಸಾರ್ವಭೌಮತೆಯ ಅಡಿಯಲ್ಲಿರಬೇಕು ಎಂದು ಎಲ್ಲರೂ ಭಾವಿಸಬೇಕು. ನಾವು ಸಂವಿಧಾನದ ಪರಮಾಧಿಕಾರಕ್ಕೆ ತಲೆಬಾಗಬೇಕು ಎಂದರು.