ಚೀನ ಬೆಂಬಲಿಸಿ ಭಾಷಣ ಆರೋಪ: ಕೇರಳ ಸಿಪಿಎಂ ಕಾರ್ಯದರ್ಶಿ ವಿರುದ್ಧ ದೂರು
ತಿರುವನಂತಪುರಂ,ಜ. 16: ಚೀನವನ್ನು ಬೆಂಬಲಿಸಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಕೇರಳದ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ತಿರುವನಂತಪುರಂ ಜಿಲ್ಲಾ ಅಧ್ಯಕ್ಷ ಎಸ್ ಸುರೇಶ್ ಡಿಜಿಪಿಗೆ ದೂರು ನೀಡಿದ್ದಾರೆ.
ಅಮೆರಿಕ-ಜಪಾನ್-ಆಸ್ಟ್ರೇಲಿಯ ದೇಶಗಳ ಜೊತೆ ಸೇರಿ ಭಾರತವು ಚೀನದ ವಿರುದ್ಧ ದಾಳಿ ಮಾಡುತ್ತಿದೆ ಎಂದು ಕಾಯಂಕುಳಂ ಎಂಬಲ್ಲಿ ಕೊಡಿಯೇರಿ ಬಾಲಕೃಷ್ಣನ್ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತ ನೆರೆಯ ಚೀನಾದೇಶದಿಂದ ಅತಿ ಹೆಚ್ಚು ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಭೂಸೇನೆ ಮುಖ್ಯಸ್ಥರೇ ಈ ಹಿಂದೆ ಹೇಳಿದ್ದರು. ವಸ್ತುಸ್ಥಿತಿ ಹೀಗಿರುವಾಗ ಕೊಡಿಯೇರಿ ನೀಡಿದ ಹೇಳಿಕೆ ದೇಶದ ಅಖಂಡತೆಗೊಡ್ಡಿದ ಸವಾಲಾಗಿದೆ ಎಂದು ದೂರಿನಲ್ಲಿ ಎಸ್.ಸುರೇಶ್ ತಿಳಿಸಿದ್ದಾರೆ.
ಕೊಡಿಯೇರಿ ಬಾಲಕೃಷ್ಣನ್ ನೀಡಿದ ಹೇಳಿಕೆ ಅತಿ ಗಂಭೀರವಾಗಿದ್ದು, ಸಂವಿಧಾನದ ಉಲ್ಲಂಘನೆಮತ್ತು ದೇಶದ್ರೋಹ ಅಪರಾಧಕ್ಕಾಗಿ ಅವರ ವಿರುದ್ಧ ಕೇಸುದಾಖಲಿಸಬೇಕೆಂದು ಸುರೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.