ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಿ ಬಂಧಿಸಲ್ಪಟ್ಟಿದ್ದ ಯುವತಿ ನಿರ್ದೋಷಿ : ಪೊಲೀಸರ ಹೇಳಿಕೆ
ಶ್ರೀನಗರ, ಫೆ.4: ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಿ ಜಮ್ಮುಕಾಶ್ಮೀರ ಪೊಲೀಸರು ಬಂಧಿಸಿದ್ದ ಯುವತಿ ನಿರ್ದೋಷಿ ಎಂದು ಕಂಡು ಬಂದ ಬಳಿಕ ಆಕೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
18ರ ಹರೆಯದ ಸಾದಿಯಾ ಅನ್ವರ್ ಶೇಖ್ ಎಂಬ ಮಹಿಳೆ ಪುಣೆಯಿಂದ ಕಾಶ್ಮೀರಕ್ಕೆ ಬಂದು ಬಿಜ್ಬೆಹಾರ ಎಂಬಲ್ಲಿ ‘ಪೇಯಿಂಗ್ ಗೆಸ್ಟ್’ ಆಗಿ ಉಳಿದುಕೊಂಡಿದ್ದರು. ಭಯೋತ್ಪಾದಕ ನಿಗ್ರಹ ದಳದವರಿಂದ ಹಲವು ಬಾರಿ ಬಂಧನಕ್ಕೊಳಗಾಗಿರುವ ಪುಣೆ ಮೂಲದ ಮಹಿಳೆಯೊಬ್ಬರು ಕಾಶ್ಮೀರಕ್ಕೆ ತೆರಳಿದ್ದು ಆಕೆಯ ಚಲನವಲನದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಇದೇ ಸಂದರ್ಭ ಕೇಂದ್ರೀಯ ಭದ್ರತಾ ಸಮಿತಿಯಿಂದ ಮಾಹಿತಿ ಬಂದಿತ್ತು. ಅಲ್ಲದೆ ಆತ್ಮಹತ್ಯಾ ಬಾಂಬರ್ ಆಗಿರುವ 18ರ ಹರೆಯದ ಯುವತಿಯೊಬ್ಬಳು ಗಣರಾಜ್ಯೋತ್ಸವ ಸಮಾರಂಭವನ್ನು ಭಂಗಗೊಳಿಸಲು ಪ್ರಯತ್ನಿಸಲಿದ್ದಾಳೆ ಎಂಬ ಸುದ್ದಿಯೂ ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ್ದ ಪೊಲೀಸರು ಜನವರಿ 25ರಂದು ದಕ್ಷಿಣ ಕಾಶ್ಮೀರದಲ್ಲಿ ಸಾದಿಯಾರನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿದ್ದರು. ಆದರೆ ಈಕೆ ನಿರ್ದೋಷಿ ಎಂದು ಕಂಡುಕೊಂಡ ಬಳಿಕ ಈಕೆಯನ್ನು ಹೆತ್ತವರ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆ.