ಸೇನಾಧಿಕಾರಿಗಳ ಮಕ್ಕಳಿಂದ ಎನ್ಎಚ್ಆರ್ಸಿಗೆ ದೂರು
ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟ
ಹೊಸದಿಲ್ಲಿ,ಫೆ.9: ಜಮ್ಮು-ಕಾಶ್ಮೀರದಲ್ಲಿಯ ಕಲ್ಲುತೂರಾಟದ ಇತ್ತೀಚಿನ ಘಟನೆಗಳಿಂದ ಸೇನಾ ಸಿಬ್ಬಂದಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸೇನಾಧಿಕಾರಿಗಳ ಮೂವರು ಮಕ್ಕಳು ಸಲ್ಲಿಸಿರುವ ದೂರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ಗಮನಕ್ಕೆ ತೆಗದುಕೊಂಡಿದೆ.
ದೂರುದಾರರು ಜ.27ರಂದು ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಸಿಗದ ಜನರ ಗುಂಪೊಂದು ಸೇನಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ ಮತ್ತು ಹಲ್ಲೆ ನಡೆಸಿದ ಇತ್ತೀಚಿನ ಘಟನೆಯ ಕುರಿತು ಸೂಕ್ತ ವಿಚಾರಣೆಗಾಗಿ ತನ್ನ ಹಸ್ತಕ್ಷೇಪವನ್ನು ಕೋರಿದ್ದಾರೆ ಎಂದು ಆಯೋಗವು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇಂತಹ ಘಟನೆಗಳು ತಮಗೆ ಆತಂಕವನ್ನುಂಟು ಮಾಡಿವೆ ಎಂದು ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ತಿಳಿಸಲಾಗಿರುವ ಅಂಶಗಳು ಮತ್ತು ಹೊರಿಸಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ಆಯೋಗವು ಪ್ರಸಕ್ತ ಸ್ಥಿತಿಗತಿ ಮತ್ತು ದೂರುದಾರರು ಎತ್ತಿರುವ ವಿಷಯಗಳ ಬಗ್ಗೆ ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳನ್ನು ತಿಳಿದುಕೊಳ್ಳಲು ವಾಸ್ತವ ವರದಿಯೊಂದನ್ನು ನಾಲ್ಕು ವಾರಗಳಲ್ಲಿ ತನಗೆ ಸಲ್ಲಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದೆ ಎಂದೂ ಹೇಳಿಕೆಯು ತಿಳಿಸಿದೆ.