ಪಾಕ್ನಲ್ಲಿ 300 ಉಗ್ರರು ಗಡಿದಾಟಲು ಕಾಯುತ್ತಿದ್ದಾರೆ : ಸೇನೆ
ಜಮ್ಮು, ಫೆ.14: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಆಯೋಜಿಸುವಲ್ಲಿ ಪಾಕ್ ಸೇನೆ ಪ್ರಧಾನ ಪಾತ್ರ ವಹಿಸುತ್ತಿದ್ದು 300ಕ್ಕೂ ಹೆಚ್ಚು ಭಯೋತ್ಪಾದಕರು ಗಡಿ ದಾಟಿ ಭಾರತದೊಳಗೆ ನುಸುಳಲು ಪಾಕ್ನ ಗಡಿ ನಿಯಂತ್ರಣಾ ರೇಖೆಯ ಬಳಿ ಕಾಯುತ್ತಿದ್ದಾರೆ ಎಂದು ಲೆಜ ದೇವರಾಜ್ ಅನ್ಬು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸೇನಾಪಡೆಯ ಉಧಾಂಪುರ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಾಕ್ನ ಪೀರ್ ಪಂಜಾಲ್ನ ದಕ್ಷಿಣ ಭಾಗದಲ್ಲಿ 185ರಿಂದ 220 ಉಗ್ರರು ಹಾಗೂ ಉತ್ತರ ಭಾಗದಲ್ಲಿ 190ರಿಂದ 225 ಉಗ್ರರು ಗಡಿದಾಟಲು ಕಾಯುತ್ತಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ತಾನದ ಸೇನಾಪಡೆಯ ನೇರ ಹಸ್ತಕ್ಷೇಪವಿದೆ ಎಂದು ಹೇಳಿದರು. ಸುಂಜುವಾನ್ ಸೇನಾ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನೆ ಪ್ರತೀಕಾರ ಕೈಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಏಟಿಗೆ ಇದಿರೇಟು ಎಂಬ ಪ್ರಶ್ನೆಯಿಲ್ಲ. ನಾವು ನಮ್ಮ ಯುದ್ಧತಂತ್ರವನ್ನು ಯೋಜಿಸಿದ್ದೇವೆ ಹಾಗೂ ಅದರಂತೆ ಮುಂದುವರಿಯುತ್ತೇವೆ. ಗಡಿನಿಯಂತ್ರಣಾ ರೇಖೆಯ ಬಳಿ ಕಾರ್ಯನಿರ್ವಹಿಸುವುದು ನಿಜಕ್ಕೂ ಸಂಕೀರ್ಣ ಹಾಗೂ ಸವಾಲಿನ ಕಾರ್ಯವಾಗಿದೆ ಎಂದರು. ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿದ ಘಟನೆಗಳಲ್ಲಿ 192 ಪಾಕ್ ಸೈನಿಕರು ಮೃತರಾಗಿದ್ದಾರೆ. ಆದರೆ ಪಾಕ್ ಪಡೆಗಳು ಒಟ್ಟು ಆರು- ಏಳು ಯೋಧರು ಮೃತರಾಗಿರುವುದಾಗಿ ಹೇಳುತ್ತಿದ್ದಾರೆ ಎಂದು ದೇವರಾಜ್ ಅನ್ಬು ಹೇಳಿದರು.