ಮಾರ್ಚ್ 5ರೊಳಗೆ ಬೇಡಿಕೆ ಈಡೇರದಿದ್ದರೆ ಎನ್ಡಿಎ ಮೈತ್ರಿಕೂಟದಿಂದ ಹೊರಕ್ಕೆ: ಟಿಡಿಪಿ ಎಚ್ಚರಿಕೆ
ಅಮರಾವತಿ(ಆಂಧ್ರಪ್ರದೇಶ), ಫೆ.16: ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿರುವ 19 ಭರವಸೆಗಳನ್ನು ಕೇಂದ್ರ ಸರಕಾರ ಮಾ.5 ರೊಳಗೆ ಈಡೇರಿಸದೇ ಇದ್ದರೆ ಎನ್ಡಿಎ ಮೈತ್ರಿ ಕೂಟದಿಂದ ಹೊರಬರುವುದಾಗಿ ತೆಲುಗು ದೇಶಂ ಪಕ್ಷ(ಟಿಡಿಪಿ) ಇದೇ ಮೊದಲ ಬಾರಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಬೇಡಿಕೆ ಈಡೇರಿಸದೇ ಇದ್ದರೆ ನಮ್ಮ ಪಕ್ಷದ ಸಚಿವರುಗಳು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಆಂಧ್ರಪ್ರದೇಶದ ಸಂಸದ ಆದಿನಾರಾಯಣ ರೆಡ್ಡಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ನೆರವು ನೀಡಿಕೆಗೆ ಸಂಬಂಧಿಸಿ ಕೇಂದ್ರ ಸರಕಾರ ಮಾಡಿಕೊಂಡಿರುವ ಒಪ್ಪಂದಕ್ಕೆ ಸಂಬಂಧಿಸಿ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಹಿಂದೆ ಹೇಳಿಕೆ ನೀಡಿದ್ದರು.
‘‘ಆಂಧ್ರಪ್ರದೇಶಕ್ಕೆ ಐದು ವರ್ಷಗಳ ಕಾಲ ವಿಶೇಷ ನೆರವು ನೀಡಿಕೆಗೆ ಕೇಂದ್ರ ಸರಕಾರ ಸಮ್ಮತಿ ನೀಡಿದೆ. ರಾಜ್ಯ ಸರಕಾರ ಕೆಲವು ಪರ್ಯಾಯ ಪದ್ದತಿಯ ಕುರಿತು ಸಲಹೆ ನೀಡಿದೆ. ಇದಕ್ಕೆ ಶೀಘ್ರವೇ ಪರಿಹಾರ ನೀಡುವ ಸಾಧ್ಯತೆಯಿದೆ’’ ಎಂದು ರಾಜ್ಯಸಭೆಯಲ್ಲಿ ಜೇಟ್ಲಿ ಹೇಳಿದ್ದಾರೆ.