ನೀರವ್ ಮೋದಿಗೆ ವಿಜಯ್ ಅಗರ್ವಾಲ್ ವಕೀಲ
ಹೊಸದಿಲ್ಲಿ, ಫೆ.19 : ಪಿಎನ್ಬಿ ವಂಚನೆ ಪ್ರಕರಣದ ಆರೋಪಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ಪರವಾಗಿ ಹಿರಿಯ ವಕೀಲ ವಿಜಯ್ ಅಗರ್ವಾಲ್ ವಾದಿಸಲಿದ್ದಾರೆ. 2ಜಿ ಸ್ಪಕ್ಟ್ರಂ ಹಗರಣದಲ್ಲಿ ‘ಹೈ ಪ್ರೊಪೈಲ್’ ಹೊಂದಿದ್ದ ಕೆಲವು ಆರೋಪಿಗಳ ಪರವಾಗಿ ವಿಜಯ್ ಅಗರ್ವಾಲ್ ಅವರೇ ವಾದಿಸಿದ್ದರು.
ವಿಪುಲ್ ಅಂಬಾನಿಯ ವಿಚಾರಣೆ
ನೀರವ್ ಮೋದಿ ಗುಂಪಿನ ಮುಖ್ಯ ಹಣಕಾಸು ಅಧಿಕಾರಿ ವಿಪುಲ್ ಅಂಬಾನಿ ಹಾಗೂ ಇತರರನ್ನು ಸಿಬಿಐ ರವಿವಾರ ವಿಚಾರಣೆಗೆ ಒಳಪಡಿಸಿದೆ. ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ಒಳಪಡಿಸಲಾಯಿತು. ಅವರನ್ನು ಇನ್ನೊಮ್ಮೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಬಿಐಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಟ್ ತನಿಖೆಗ ಆಗ್ರಹ
ಪಂಜಾಬ್ ನ್ಯಾಶನಲ್ ಬ್ಯಾಂಕ್ನ ವಂಚನೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಸಿಟ್)ದಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ದಾವೆಯೊಂದು ಹೂಡಲಾಗಿದೆ. ‘‘ಗೀತಾಂಜಲಿ ಜೆಮ್ಸ್ ಹಾಗೂ ಅದರ ಮಾಲಕ ಮೆಹುಲ್ ಚೋಕ್ಸಿ 80 ಲಕ್ಷ ರೂ. ವಂಚಿಸಿದ್ದಾರೆ. ನಾವು ಗೀತಾಂಜಲಿಯಲ್ಲಿ ಹೂಡಿಕೆ ಮಾಡಿದ್ದೆವು. ಈ ಪ್ರಕ್ರಿಯೆಯಲ್ಲಿ ಮೆಹುಲ್ ಚೋಕ್ಸಿ ಅವರನ್ನು ಭೇಟಿಯಾಗಿದ್ದೆವು.’’ ಎಂದು ದೂರುದಾರ ವೈಭವ್ ಖುರಾನಿಯಾ ತಿಳಿಸಿದ್ದಾರೆ.
ಗೋಕುಲ್ನಾಥ್ ಶೆಟ್ಟಿಗೆ ಪಾಸ್ವರ್ಡ್ ಗೊತ್ತಿತ್ತು
ಸಿಬಿಐ ವಿಚಾರಣೆ ವೇಳೆ ಗೋಕುಲ್ನಾಥ್ಗೆ ಪಿಎನ್ಬಿಯ ಪಾಸ್ವರ್ಡ್ ತಿಳಿದಿತ್ತು ಎಂಬ ವಿಚಾರ ಬಹಿರಂಗಗೊಂಡಿದೆ. ಗೋಕುಲ್ನಾಥ್ಗೆ ‘ಸ್ವಿಫ್ಟ್ ಮೆಸೇಜ್ ವ್ಯವಸ್ಥೆ’ಯ 5ನೇ ಹಂತದ ಪಾಸ್ವರ್ಡ್ ಬಗ್ಗೆ ಮಾಹಿತಿ ಇತ್ತು. ಇದನ್ನು ಬಳಸಿ ಅವರು ಇತರ ಬ್ಯಾಂಕ್ಗಳ ವಿದೇಶಿ ಶಾಖೆಗೆ ಸಂದೇಶ ರವಾನಿಸುತ್ತಿದ್ದರು. ಅಲ್ಲದೆ ಈ ಪಾಸ್ ವರ್ಡ್ ಅನ್ನು ನೀರವ್ ಮೋದಿ ಕಂಪೆನಿಯ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು ಎಂಬುದು ಸಿಬಿಐ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.