ತೆಲಂಗಾಣ ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಹೊಗೆ
ಹೈದರಾಬಾದ್, ಫೆ.27: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ನಲ್ಲಿ ಕಾಣಿಸಿಕೊಂಡ ಹೊಗೆ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಕರೀಮ್ನಗರದಲ್ಲಿ ನಡೆದಿದೆ.
ಕರೀಮ್ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿದ್ದ ಹೆಲಿಪ್ಯಾಡ್ನಲ್ಲಿ ನಿಂತಿದ್ದ ಹೆಲಿಕಾಪ್ಟರ್ನಲ್ಲಿ ಇರಿಸಲಾಗಿದ್ದ ಬ್ಯಾಗ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ಹೆಲಿಕಾಪ್ಟರ್ನಲ್ಲಿ ಚಂದ್ರಶೇಖರ ರಾವ್ , ಪಕ್ಷದ ಮುಖಂಡ ಕೆ.ಕೇಶವ ರಾವ್, ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿ ಸ್ಮಿತಾ ಸಬರ್ವಾಲ್ ಪ್ರಯಾಣಿಸಲು ಸಿದ್ಧರಾಗಿ ಕುಳಿತಿದ್ದರು. ಹೊಗೆ ಕಾಣಿಸಿಕೊಂಡ ಕೂಡಲೇ ಅವರನ್ನು ಅಲ್ಲಾಡದಂತೆ ಕುಳಿತಿರಲು ಭದ್ರತಾ ಸಿಬ್ಬಂದಿ ಸೂಚಿಸಿದರು. ತಕ್ಷಣವೇ ಪೊಲೀಸರು ಬ್ಯಾಗನ್ನು ದೂರ ಕೊಂಡೊಯ್ದ ಬಳಿಕ ಮುಖ್ಯಮಂತ್ರಿ ಹಾಗೂ ಇತರರು ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದರು. ಭದ್ರತಾ ಸಿಬ್ಬಂದಿಗಳು ಪರಸ್ಪರ ಸಂಪರ್ಕಿಸಲು ಬಳಸುವ ವಯರ್ಲೆಸ್ ಸೆಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ.
Next Story