ಸಚಿವಾಲಯದ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ : ರೈತರ ಬೆದರಿಕೆ
ಮುಂಬೈ, ಮಾ.8: ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಮಂತ್ರಾಲಯ (ಸಚಿವಾಲಯ)ದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಾರಾಷ್ಟ್ರದ ರೈತರು ಸೇರಿದಂತೆ ಸುಮಾರು 35 ಮಂದಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಜನವರಿಯಲ್ಲಿ ಮಹಾರಾಷ್ಟ್ರದ ಮಂತ್ರಾಲಯದ ಹೊರಗಡೆ 84ರ ಹರೆಯದ ರೈತ ಧರ್ಮ ಪಾಟೀಲ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಒಂದು ವಾರದ ಬಳಿಕ ಮೃತಪಟ್ಟಿದ್ದರು. ವಿದ್ಯುತ್ ಯೋಜನೆಯೊಂದಕ್ಕೆ ಸ್ವಾಧೀನಪಡಿಸಿಕೊಂಡಿದ್ದ ತನ್ನ ಜಮೀನಿಗೆ ಸೂಕ್ತ ಪರಿಹಾರ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಪಾಟೀಲ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯ ಸರಕಾರ ರೈತರ ದುಸ್ಥಿತಿ ಬಗ್ಗೆ ಸಂವೇದನಾರಹಿತ ಧೋರಣೆ ತಳೆದಿದೆ ಎಂದು ಈ ಘಟನೆಯ ಬಳಿಕ ವಿಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಟೀಕಾಪ್ರಹಾರ ನಡೆಸಿದ್ದರು.
ಇದೀಗ ಮಂತ್ರಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಗೆ ಮಿತಿ ವಿಧಿಸುವ ಸಾಧ್ಯತೆಯಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ವೈಯಕ್ತಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಂತ್ರಾಲಯದ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ತನ್ನ ಗಂಡನನ್ನು ಬಲಿಪಶು ಮಾಡಲಾಗಿದೆ ಎಂದು ಮಹಿಳೆಯೊಬ್ಬಳು ಮಂತ್ರಾಲಯದ ಎದುರು ಪ್ರತಿಭಟನೆ ನಡೆಸಿದ್ದಳು. ಇನ್ನೊಂದು ಘಟನೆಯಲ್ಲಿ ತನ್ನ ಜಮೀನನ್ನು ಸೋದರ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ ಎಂದು ದೂರಿ ರೈತನೋರ್ವ ಪ್ರತಿಭಟನೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತ ವರ್ಗದವರಿಗೆ ತಮ್ಮ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಮುಟ್ಟಿಸಲು ಆತ್ಮಹತ್ಯೆ ಅಂತಿಮ ವಿಧಾನ ಎಂದು ಈ ಜನತೆ ಭಾವಿಸಿದ್ದಾರೆ. ಧರ್ಮ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಅಪಾಯಕಾರಿ ಬೆಳವಣಿಗೆಗೆ ಎಡೆ ಮಾಡಿಕೊಟ್ಟಿದೆ ಎನ್ನುತ್ತಾರೆ ಅಧಿಕಾರಿಗಳು.
ಕಳೆದ ಹಲವು ದಿನಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿರುವ ಪತ್ರಗಳು ವಿವಿಧ ಜಿಲ್ಲಾಧಿಕಾರಿಗಳಿಗೆ ಬಂದಿದ್ದು, ಇವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತ ಜನರ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಮುಂಬೈ ಪೊಲೀಸರು ಆಯಾ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಮುಂಬೈಗೆ ತೆರಳುವ ನಿರ್ಧಾರವನ್ನು ಕೈಬಿಡುವಂತೆ ಈ ಜನರ ಮನವೊಲಿಸಬೇಕೆಂದೂ ಪತ್ರದಲ್ಲಿ ತಿಳಿಸಲಾಗಿದೆ. ಜೊತೆಗೆ, ಪತ್ರ ಕಳಿಸಿದವರ ಭಾವಚಿತ್ರ ಹಾಗೂ ವೈಯಕ್ತಿಕ ಮಾಹಿತಿ ಹಾಕಲಾಗುತ್ತಿದೆ. ಪತ್ರ ಬರೆದಿರುವವರಲ್ಲಿ ಕೆಲವರು ಈಗಾಗಲೇ ಮುಂಬೈ ತಲುಪಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹೀಗೆ ಸಂಗ್ರಹಿಸಿರುವ ಭಾವಚಿತ್ರವನ್ನು ಸಿಸಿಟಿವಿ ನಿಯಂತ್ರಣಾ ಕೊಠಡಿಯ ಹಾರ್ಡ್ ಡಿಸ್ಕ್ಗೆ ಫೀಡ್ ಮಾಡಲಾಗಿದೆ. ಮುಂಬೈಯ ಜನಗಂಗುಳಿಯಲ್ಲಿ ಇವರನ್ನು ಕಂಡುಹಿಡಿಯಲು ಇದರಿಂದ ಅನುಕೂಲವಾಗುತ್ತದೆ. ವಿಧಾನಸಭೆ ಹಾಗೂ ಮಂತ್ರಾಲಯಕ್ಕೆ ಭೇಟಿ ನೀಡುವವರನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ದಕ್ಷಿಣ ಮುಂಬೈ ಪೊಲೀಸರ ವ್ಯಾಪ್ತಿಗೆ ಬರುವ ಮಂತ್ರಾಲಯದ ಸುತ್ತ ಮುತ್ತ ಭದ್ರತಾ ವ್ಯವಸ್ಥೆ ಬಿಗುಗೊಳಿಸಲಾಗಿದೆ ಎಂದು ಡಿಸಿಪಿ( ವಲಯ 1) ಮನೋಜ್ ಶರ್ಮ ತಿಳಿಸಿದ್ದಾರೆ.