ಮಗನನ್ನು ಹುಡುಕಿ ಬಂದ ಪೊಲೀಸರು: ಹೃದಯಾಘಾತದಿಂದ ತಂದೆ ಮೃತ್ಯು
ಚುಂಡಲ್(ಕೇರಳ), ಮಾ.16: ಪೊಲೀಸರು ಮಗನನ್ನು ಹುಡುಕಿ ಬಂದಿರುವುದನ್ನು ತಿಳಿದು ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಕೇರಳದ ತ್ರಿಶೂರಿನ ಚುಂಡಲ್ ಪುದುಶ್ಶೇರಿ ನಾರಾಯಣನ್ ಎಂಬವರ ಪುತ್ರನನ್ನು ಪೊಲೀಸರು ಹುಡುಕಿಕೊಂಡು ಬಂದಿದ್ದರು.
ಬುಧವಾರ ಸಂಜೆ ನಾರಾಯಣನ್ರ ಪುತ್ರ ದಿನೀಶ್ನನ್ನು ಪೊಲೀಸರು ಹುಡುಕಿಕೊಂಡು ಮನೆಗೆ ಬಂದಿದ್ದರು. ಮಗ ಮನೆಯಲ್ಲಿ ಇಲ್ಲ ಎಂದು ದಿನೀಶ್ ತಾಯಿ ಹೇಳಿದಾಗ ಪೊಲೀಸರು ದಿನೀಶ್ನ ಫೋನ್ ನಂಬರ್ ಕೇಳಿದರು. ಇದೇ ಸಂದರ್ಭ ಕೆಲಸ ಮುಗಿಸಿಕೊಂಡು ನಾರಾಯಣನ್ ಮನೆಗೆ ಬಂದಿದ್ದರು. ಈವೇಳೆ ನಾರಾಯಣನ್ರ ಕೈಯಲ್ಲಿದ್ದ ಫೋನನ್ನು ಬಲವಂತವಾಗಿ ಪೊಲೀಸರು ಕಿತ್ತುಕೊಂಡು ದಿನೇಶ್ ನ ನಂಬರ್ ತೆಗೆದುಕೊಂಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಮರುದಿನ ಗುರುವಾರ ನಾರಾಯಣ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದಾಗ ತೃಶೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಧ್ಯಾಹ್ನದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆಎಂದು ವೈದ್ಯರು ಘೋಷಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಪೊಲೀಸರ ಬೆದರಿಕೆಯಿಂದ ನಾರಾಯಣ್ಗೆ ಹೃದಯಾಘಾತವಾಗಿದೆ ಎಂದು ಆರೋಪಿಸಿದ್ದು, ಈ ಕುರಿತು ತನಿಖೆಗೆ ಆಗ್ರಹಿಸಿ ತ್ರಿಶೂರ್ ಎಸ್ಪಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.