ಲೋಕಾಯುಕ್ತ ಏಕೆ ನೇಮಿಸಿಲ್ಲ: 12 ರಾಜ್ಯಗಳಿಗೆ ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ, ಮಾ.23: ಲೋಕಾಯುಕ್ತವನ್ನು ಏಕೆ ನೇಮಕ ಮಾಡಿಲ್ಲ ಎಂದು 12 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ಜಸ್ಟಿಸ್ ರಂಜನ್ ಗೊಗೊಯ್ ಹಾಗೂ ಆರ್. ಬಾನುಮತಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠ 12 ರಾಜ್ಯಗಳಾದ ಜಮ್ಮು-ಕಾಶ್ಮೀರ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಾಲ್ಯಾಂಡ್, ಪಾಂಡಿಚೇರಿ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಅರುಣಾಚಲ ಪ್ರದೇಶ, ದಿಲ್ಲಿ ಹಾಗೂ ಪಶ್ಚಿಮ ಬಂಗಾಳಕ್ಕೆೆ ಲೋಕಾಯುಕ್ತವನ್ನು ನೇಮಕ ಮಾಡದೇ ಇರಲು ಕಾರಣ ಏನೆಂದು ತಿಳಿಸುವಂತೆ ಆದೇಶಿಸಿದೆ.
ಲೋಕಾಯುಕ್ತವನ್ನು ಯಾವಾಗ ನೇಮಕ ಮಾಡುತ್ತೀರಿ ಎಂದು ಸ್ಪಷ್ಟಪಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಲೋಕಪಾಲ್ನ ಸೆಕ್ಷನ್ 63 ಹಾಗೂ ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ ಎಲ್ಲ ರಾಜ್ಯಗಳು ಲೋಕಾಯುಕ್ತವನ್ನು ನೇಮಕ ಮಾಡಬೇಕು.
ಲೋಕಾಯುಕ್ತ ಸಶಕ್ತವಾಗಿ ಕಾರ್ಯನಿರ್ವಹಿಸಲು ಅಗತ್ಯ ಮೂಲಭೂತ ಸೌಕರ್ಯ ಹಾಗೂ ಸಾಕಷ್ಟು ಹಣಕಾಸು ನೆರವು ಒದಗಿಸುವಂತೆ ಆದೇಶಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ.
ಹೆಚ್ಚಿನ ರಾಜ್ಯಗಳು ಮೂಲಭೂತ ಸೌಕರ್ಯ ಹಾಗೂ ಸಾಕಷ್ಟು ಬಜೆಟ್ ಒದಗಿಸದೇ ಉದ್ದೇಶಪೂರ್ವಕವಾಗಿ ಲೋಕಾಯುಕ್ತವನ್ನು ದುರ್ಬಲಗೊಳಿಸುತ್ತಿವೆ ಎಂದು ಅರ್ಜಿದಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.