7 ಜಿಲ್ಲೆಗಳಿಗೆ ಹಬ್ಬಿದ ಕೋಮ ಹಿಂಸಾಚಾರ: ಮುಂಗರ್ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ
ಪಾಟ್ನಾ, ಮಾ. 28: ಬಾಗಲ್ಪುರದಲ್ಲಿ ಮಾರ್ಚ್ 17ರಂದು ರಾಮನವಮಿ ಮೆರವಣಿಗೆ ಸಂದರ್ಭ ಆರಂಭವಾದ ಕೋಮ ಹಿಂಸಾಚಾರ ಏಳು ಜಿಲ್ಲೆಗಳಿಗೆ ಹರಡಿದ್ದು, ಬುಧವಾರ ಬೆಳಗ್ಗೆ ಮುಂಗರ್ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಳೆದ 10 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ 100 ಜನರು ಗಾಯಗೊಂಡಿದ್ದಾರೆ ಹಾಗೂ ಹಲವು ಅಂಗಡಿ, ಮುಂಗಟ್ಟುಗಳು ಬೆಂಕಿಗಾಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನವಮಿ ಸಂಭ್ರಮಾಚರಣೆ ಸಂದರ್ಭ ಉದ್ಭವಿಸಿದ ಹಿಂಸಾಚಾರವನ್ನು ನಿಯಂತ್ರಿಸಲು ಹೋರಾಟ ನಡೆಸುತ್ತಿರುವ ರಾಜ್ಯ ಸರಕಾರ ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ ಹಾಗೂ ಅರೆಸೈನಿಕ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಿದೆ. ಹಾಗೂ ಇದುವರೆಗೆ ಸುಮಾರು 200ಕ್ಕೂ ಅಧಿಕ ಜನರನ್ನು ಬಂಧಿಸಿದೆ.
ರಾಮನವಮಿಯ ಚೈತಿ ದುರ್ಗಾ ಮೆರವಣಿಗೆ ಸಂದರ್ಭ ಹಾಕಲಾದ ವಿವಾದಾತ್ಮಕ ಹಾಡು ಹಾಗೂ ಕೋಮು ಪ್ರಚೋದಕ ಘೋಷಣೆ ಹಿನ್ನೆಲೆಯಲ್ಲಿ ಸ್ಪೋಟಗೊಂಡ ಹಿಂಸಾಚಾರ ಹಲವು ಜಿಲ್ಲೆಗಳಿಗೆ ಹಬ್ಬಿದ್ದು, ಈ ಪಟ್ಟಿಯಲ್ಲಿ ಈಗ ಮುಂಗರ್ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.